ಕೊಚ್ಚಿ : ನಿಷೇಧಿತ ಸಿಮಿ ಸಂಘಟನೆಯ ಶಸ್ತ್ರಾಸ್ತ್ರ ತರಬೇತಿ ಕೇಂದ್ರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಮಿತಿಯ (ಎನ್ಐಎ) ವಿಶೇಷ ನ್ಯಾಯಾಲಯವು 18 ಮಂದಿಯನ್ನು ತಪ್ಪಿತಸ್ಥರು ಎಂದು ಘೋಷಿಸಿದೆ. ಉಳಿದ 17 ಮಂದಿಯನ್ನು ಖುಲಾಸೆಗೊಳಿಸಿದೆ.
ಕಾನೂನುಬಾಹಿರ ಚಟುವಟಿಕೆ ತಡೆಕಾಯ್ದೆ (ಯುಎಪಿಎ)ಸೇರಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಕಲಂನ ಅಡಿಯಲ್ಲಿ ವಿಶೇಷ ನ್ಯಾಯಾಧೀಶ ಕೌಸೆರ್ ಎಡಪ್ಪಗಾಥ್ ಅವರು ತೀರ್ಪು ಪ್ರಕಟಿಸಿದರು. ಅಪರಾಧಿಗಳ ವಿರುದ್ಧ ಶಿಕ್ಷೆ ಪ್ರಮಾಣ ಮಂಗಳವಾರ ಪ್ರಕಟವಾಗಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಉಳಿದವರು ಅಹಮದಾಬಾದ್, ಬೆಂಗಳೂರು, ಭೋಪಾಲ್ ಜೈಲಿನಲ್ಲಿ ಬಂಧಿಯಾಗಿದ್ದಾರೆ.
2007ರ ನವೆಂಬರ್ ತಿಂಗಳಲ್ಲಿ ಸಿಮಿ ಸಂಘಟನೆಯ ಕಾರ್ಯಕರ್ತರು ವಾಗಾಮೊನ್ನ ಥಂಗಲ್ಪಾರಾದಲ್ಲಿ ಸಿಮಿ ಕೇಂದ್ರದಲ್ಲಿ ತರಬೇತಿಯಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದ ವೇಳೆ, ಆರೋಪಿಗಳು ದೈಹಿಕ ಕಸರತ್ತು, ಶಸ್ತ್ರಾಸ್ತ್ರ ತರಬೇತಿ, ಬಾಂಬ್ಗಳ ತಯಾರಿಕೆಯಲ್ಲಿ ತೊಡಗಿರುವುದು ಸಾಕ್ಷಿ ಸಮೇತ ಬಯಲಾಗಿತ್ತು. ಆರೋಪಿಗಳನ್ನು ಬಂಧಿಸಿದ್ದ ಎನ್ಐಎ ಅಧಿಕಾರಿಗಳ ತಂಡ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.