ಬೆಂಗಳೂರು: ಜಾಲಹಳ್ಳಿಯ ಮನೆಯೊಂದರಲ್ಲಿ ನಿವಾಸಿಗಳು ಇರುವಾಗಲೇ ಒಳಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ, ಲ್ಯಾಪ್ಟಾಪ್ ಹಾಗೂ ಮೊಬೈಲ್ ಕದ್ದುಕೊಂಡು ಹೋಗಿದ್ದಾನೆ.
ಈ ಸಂಬಂಧ ಸ್ಥಳೀಯ ನಿವಾಸಿ ಹುಸೇನ್, ಜಾಲಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಹುಸೇನ್, ಮೇ 4ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಬಾಗಿಲು ಬಂದ್ ಮಾಡುವುದನ್ನು ಮರೆತಿದ್ದ ಅವರು, ಲ್ಯಾಪ್ ಟಾಪ್ ಮತ್ತು ಮೊಬೈಲ್ ಟೇಬಲ್ ಮೇಲಿಟ್ಟು ಮಲಗಿದ್ದರು. ಬೆಳಿಗ್ಗೆ ಎದ್ದು ನೋಡಿದಾಗ ಅವೆರಡೂ ಟೇಬಲ್ ಮೇಲಿರಲಿಲ್ಲ’ ಎಂದು ಪೊಲೀಸರು
ತಿಳಿಸಿದರು.
‘ಮನೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಲಾಗಿತ್ತು. ನಸುಕಿನಲ್ಲಿ ಯುವಕನೊಬ್ಬ ಮನೆಯೊಳಗೆ ಬಂದು ಲ್ಯಾಪ್ಟಾಪ್ ಹಾಗೂ ಮೊಬೈಲ್ ಕದ್ದೊಕೊಂಡು ಹೋಗಿದ್ದು ಸೆರೆಯಾಗಿದೆ. ಆ ಯುವಕ ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.