ಜುಲೈನಲ್ಲಿ ಅಡಿಸ್ ಅಬಾಬದಲ್ಲಿ ಅಲಿಪ್ತ ರಾಷ್ಟ್ರಗಳ ಸಭೆ
ನವದೆಹಲಿ, ಮೇ 15– ಕೈರೋದಲ್ಲಿ 1964 ರಲ್ಲಿ ನಡೆದ ದ್ವಿತೀಯ ಅಲಿಪ್ತ ಶೃಂಗಸಮ್ಮೇಳನದಲ್ಲಿ ಭಾಗವಹಿಸಿದ್ದ 47 ರಾಷ್ಟ್ರಗಳು ಜುಲೈ ತಿಂಗಳ ಅಂತ್ಯದಲ್ಲಿ ಅಡಿಸ್ ಅಬಾಬದಲ್ಲಿ ಸಭೆ ಸೇರುವ ಸಂಭವವಿದೆ.
ಅಲಿಪ್ತ ರಾಷ್ಟ್ರಗಳ ಮೂರನೆ ಶೃಂಗ ಸಮ್ಮೇಳನ ಕರೆಯುವುದರಲ್ಲಿ ಯುಗೋಸ್ಲಾವಿಯಾದ ಅಧ್ಯಕ್ಷ ಟಿಟೋ ಅವರು ಮುಂದಾಳುತನ ವಹಿಸಿದ್ದಾರೆ. ಇದೇ ಅಡಿಸ್ ಅಬಾಬ ಸಭೆಗೆ ಕಾರಣ.
ಮಹೇಶಯೋಗಿ: ಬೀಟಲ್ಸ್ಗೆ ಭ್ರಮನಿರಸನ
ನ್ಯೂಯಾರ್ಕ್, ಮೇ 15– ಮಹರ್ಷಿ ಮಹೇಶ ಯೋಗಿಯ ಧ್ಯಾನ ಅಧಿವೇಶನಗಳಿಗೆ ಪ್ರಸಿದ್ಧಿಯನ್ನು ತಂದ ಬೀಟಲ್ಸ್ಗೆ ಭ್ರಮನಿರಸನವಾಗಿದೆ.
‘ಕನಸು ಮುಗಿಯಿತು, ಅವರ ಬಗ್ಗೆ ಇಟ್ಟುಕೊಂಡಿದ್ದ ಭ್ರಾಂತಿ ನಿರಸನಗೊಂಡಿದೆ’ ಎಂದು ವಾಲ್ ಮ್ಯಾಕ್ ಕಾಟ್ನನ್ ಮತ್ತು ಲೆನಾನ್ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಹೇಳಿದರು.
‘ನಾವು ತಪ್ಪು ಮಾಡಿದೆವು’... ಮಹರ್ಷಿಯ ಗಿರಿಧಾಮವನ್ನು ಬಿಟ್ಟಿದ್ದಕ್ಕೆ ಕಾರಣವನ್ನು ವಿವರಿಸುತ್ತಾ ಹೇಳಿದರು. ಮ್ಯಾಕ್ ಕಾಟ್ನನ್ ಮತ್ತು ಲೆನಾನ್ ಮಾತ್ರ ನ್ಯೂಯಾರ್ಕಿನಲ್ಲಿದ್ದಾರೆ. ಜಾರ್ಜ್ ಹ್ಯಾರಿಸನ್ ಮತ್ತು ರಿಂಗೋಸ್ಟಾರ್ ಇಲ್ಲಿಲ್ಲ.
ಟೆಕ್ಸಾಸ್ನ ಬದಲಿ ಹೃದಯಿ ಮರಣ
ಹೌಸ್ಟನ್ (ಟೆಕ್ಸಾಸ್), ಮೇ 15– ಕಳೆದ ಮಂಗಳವಾರ ಬದಲಿ ಹೃದಯ ಚಿಕಿತ್ಸೆಗೊಳಗಾಗಿದ್ದ ಅಲ್ಪೈನ್ (ಟೆಕ್ಸಾಸ್)ನ 62 ವರ್ಷ ವಯಸ್ಸಿನ ಜಾನ್ ಸ್ಟಕ್ವಿಷ್ ನಿನ್ನೆ ರಾತ್ರಿ ಮರಣ ಹೊಂದಿದರು. ಸೋಮವಾರ ರಾತ್ರಿ ಅವರ ದೇಹ ಸ್ಥಿತಿ ವಿಷಮಿಸಿತ್ತು.
ಬಿ. ಪುಟ್ಟಸ್ವಾಮಯ್ಯ, ಗೌಸ್ ಮೊಹಿಯುದ್ದೀನ್ಗೆ 250 ರೂ. ಮಾಸಾಶನ
ನವದೆಹಲಿ, ಮೇ 15– ರಾಜ್ಯದ ಹಿರಿಯ ಪತ್ರಕರ್ತರೂ ಸಾಹಿತಿಗಳೂ ಅದ ಶ್ರೀ ಬಿ. ಪುಟ್ಟಸ್ವಾಮಯ್ಯ ಮತ್ತು ಗೌಸ್ ಮೊಹಿಯುದ್ದೀನ್ ಅವರುಗಳಿಗೆ ಸರ್ಕಾರ ತಿಂಗಳಿಗೆ 250 ರೂಪಾಯಿ ಮಾಸಾಶನವನ್ನು ನೀಡಲು ಮಂಜೂರಾತಿಯನ್ನು ನೀಡಿದೆ.