ತೆಲಸಂಗ: ಗ್ರಾಮದ ಮಹೇಶ ಕುಮಠಳ್ಳಿ ಅಥಣಿ ಶಾಸಕರಾಗಿ ಆಯ್ಕೆಯಾದ ಬಳಿಕ ಅವರ ಕುಟುಂಬದ ಸದಸ್ಯೆಯರು ಗುಲಾಲ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮತದಾರರನ್ನು ಅಭಿನಂದಿಸಿದರು.
ಕುಟುಂಬದ ರಾಜೇಶ್ವರಿ ಕುಮಠಳ್ಳಿ ಮಾತನಾಡಿ, ‘ನಮ್ಮವರೊಬ್ಬರು ಜನತೆಯ ಸೇವೆಗೆ ಶಾಸಕರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಮೂಲತಃ ರೈತ ಕುಟುಂಬದವರಾದ ನಾವು ರೈತರ ನೋವು ನಲಿವುಗಳನ್ನು ಅರಿತು ಬೆಳೆದವರು. ಇಂದು ಜನ ಮತಕೊಟ್ಟ ಆಯ್ಕೆಮಾಡಿದ್ದಾರೆ, ಅವರ ಋಣ ತೀರಿಸಲು ಕುಮಠಳ್ಳಿ ಮನೆತನದವರ ಬಾಗಿಲು ತೆರೆದಿರುತ್ತದೆ. ಈ ಗೆಲುವು ಕೇವಲ ಕುಮಠಳ್ಳಿ ಅವರದಲ್ಲ, ಇಡೀ ಗ್ರಾಮದ್ದಾಗಿದೆ’ ಎಂದರು.
ಜಯಶ್ರೀ ಕುಮಠಳ್ಳಿ, ಸವಿತಾ ಕುಮಠಳ್ಳಿ, ಸೀಮಾ ಕುಮಠಳ್ಳಿ, ದಾನಮ್ಮ ಕುಮಠಳ್ಳಿ, ಕಸ್ತೂರಿ ಕುಮಠಳ್ಳಿ, ಶೋಭಾ ಕುಮಠಳ್ಳಿ, ಲಕ್ಷ್ಮಿ ಕುಮಠಳ್ಳಿ ಇತರರು ಇದ್ದರು.