ಕಲಬುರ್ಗಿ: ಬಳ್ಳಾರಿ ಹೊರತು ಪಡಿಸಿ ಹೈದರಾಬಾದ್ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಬಿಜೆಪಿ ಬಲ ವೃದ್ಧಿಸಿಕೊಂಡಿದೆ. ಕಾಂಗ್ರೆಸ್ ಬಲ ಕುಸಿದಿದ್ದರೆ, ಜೆಡಿಎಸ್ ಯಥಾಸ್ಥಿತಿ ಕಾಯ್ದುಕೊಂಡಿದೆ.
ಐದು ಜಿಲ್ಲೆಗಳ 31 ಸ್ಥಾನಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನ ಪಡೆದಿತ್ತು. ಈಗ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ನಾಲ್ಕು ಸ್ಥಾನಗಳಲ್ಲಷ್ಟೇ ಗೆದ್ದಿದ್ದ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ 2008ರಲ್ಲಿಯ ತನ್ನ ಸಾಧನೆ ಸರಿಗಟ್ಟಿದೆ.
ಜೆಡಿಎಸ್ ಹಿಂದಿನ ಎರಡು ಚುನಾವಣೆಗಳಲ್ಲಿಯೂ ನಾಲ್ಕು ಸ್ಥಾನ ಗೆದ್ದಿತ್ತು. ಈಗಲೂ ನಾಲ್ಕು ಸ್ಥಾನ ಗೆದ್ದಿದೆ. ಯಾದಗಿರಿ, ಬೀದರ್ಗಳಲ್ಲಿ ತಲಾ ಒಂದು, ರಾಯಚೂರಲ್ಲಿ ಎರಡು ಸ್ಥಾನಗಳು ಆ ಪಕ್ಷಕ್ಕೆ ಬಂದಿವೆ.
ಕೊಪ್ಪಳ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಬಿಜೆಪಿ ಸಾಧನೆ ಉತ್ತಮವಾಗಿದೆ. ಆದರೆ, ಬೀದರ್ ಜಿಲ್ಲೆಯಲ್ಲಿ ಬಿಜೆಪಿಗೆ ಒಲಿದಿದ್ದು ಒಂದೇ ಸ್ಥಾನ.
ಈ ಜಿಲ್ಲೆಗಳ ನಾಲ್ವರು ಸಚಿವರಲ್ಲಿ ಸೇಡಂನಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ಯಲಬುರ್ಗಾದಲ್ಲಿ ಬಸವರಾಜ ರಾಯರಡ್ಡಿ ಪರಾಭವಗೊಂಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ (ಚಿತ್ತಾಪುರ), ಪ್ರಕಾಶ ಖಂಡ್ರೆ (ಭಾಲ್ಕಿ) ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಲ್ಲಿಂದ ಅತ್ಯಧಿಕ ಒಂಬತ್ತು ಹೊಸಬರು ವಿಧಾನಸಭೆ ಪ್ರವೇಶಿಸಿದ್ದು, ಅವರಲ್ಲಿ ಒಬ್ಬರು ಮಹಿಳೆಯೂ ಇದ್ದಾರೆ. ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದ್ದ ಏಳು ಜನರಲ್ಲಿ ಐವರು ಪರಾಭವಗೊಂಡಿದ್ದಾರೆ. ಮಾಲೀಕಯ್ಯ ಗುತ್ತೇದಾರ, ಅಶೋಕ ಖೇಣಿ, ಇಕ್ಬಾಲ್ ಅನ್ಸಾರಿ, ಮಾನಪ್ಪ ವಜ್ಜಲ್ ಸೋತವರಲ್ಲಿ ಪ್ರಮುಖರು.