ಉಡುಪಿ: ವಿಧಾನ ಸಭಾ ಚುನಾ ವಣೆಯಲ್ಲಿ ಜಿಲ್ಲೆಯ ಐದೂ ಸ್ಥಾನವನ್ನೂ ಗೆಲ್ಲುವ ಮೂಲಕ ಬಿಜೆಪಿ ಕರಾವಳಿಯಲ್ಲಿ ಹೊಸ ದಾಖಲೆ ಸೃಷ್ಠಿಸಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 3 ಸ್ಥಾನ, ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಹಾಗೂ ಕುಂದಾಪುರದಲ್ಲಿಪಕ್ಷೇತರ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬೈಂದೂರು,ಕಾಪು, ಉಡುಪಿ ಕ್ಷೇತ್ರದಲ್ಲಿ ಆಡಳಿತರೂಢ ಸರ್ಕಾರದ ಶಾಸಕರು ಇದ್ದ ಕಾರಣ ಗೆಲುವು ಸಾಧಿಸುವುದು ಸ್ವಲ್ಪ ಮಟ್ಟಿಗೆ ಸವಾಲಾಗಿತ್ತು ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮೀತ್ ಶಾ ಅವರ ಭೇಟಿ, ಮಲ್ಪೆಯಲ್ಲಿ ನಡೆದ ಮೀನುಗಾರ ಸಮಾವೇಶ, ಶಕ್ತಿ ಕೇಂದ್ರ ಪ್ರಮುಖರ್ ಸಮಾವೇಶ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿಸಿತ್ತು. ಮೋದಿ ಭೇಟಿ ನಂತರ ಜಿಲ್ಲೆಯಲ್ಲಿ ಗೆಲುವಿನ ಮಿಂಚು ಹರಿಸಿದೆ. ಕೇಂದ್ರ ಸರ್ಕಾರದ ಸಾಧನೆಗಳು ಮತದಾರರನ್ನು ಸಂಪರ್ಕಿಸಲು ಬಹುದೊಡ್ಡ ಮಾನದಂಡವಾಗಿ ಉಪ ಯೋಗಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಮತಗಟ್ಟೆಗಳ ಸಂಪೂರ್ಣ ಚಿತ್ರಣ ವನ್ನು ಹೊಂದಿರುವ ಕಾರ್ಯಕರ್ತರು ಆಯಾ ಪ್ರದೇಶದಲ್ಲಿ ಪಕ್ಷಕ್ಕೆ ಪೂರಕವಾಗಿರುವ ವಾತಾವರಣವನ್ನು ಮತ್ತಷ್ಟು ಪ್ರಬಲಗೊಳಿಸಲಾಯಿತ್ತು. ಪೇಜ್ ಪ್ರಮುಖ್, 4 ಬೂತ್ಗಳಿಗೊಂದು ಒಂದು ಶಕ್ತಿ ಕೇಂದ್ರ ರಚಿಸುವ ಮೂಲಕ ಕರಾವಳಿಯ 5 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಬಹುಮತದಿಂದ ವಿಜಯಗೊಳಿಸಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ಬಿಜೆಪಿಯ ಸಂಘಟನೆಯ ಬಲ, ಬದ್ಧತೆಯ ಕಾರ್ಯಕರ್ತರ ಪಡೆ ಯಿಂದಾಗಿ 5 ಜನ ಶಾಸಕರನ್ನು ನಿರೀ ಕ್ಷೆಗಿಂತ ಹೆಚ್ಚಿನ ಅಂತರ ಗೆಲುವು ಸಾಧಿಸಿದ್ದಾರೆ. ಕಾರ್ಕಳದಲ್ಲಿ ವಿ. ಸುನಿಲ್ ಕುಮಾರ್ ಅವರು 42,566, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ 56,405, ಉಡುಪಿಯಲ್ಲಿ ಕೆ. ರಘುಪತಿ ಭಟ್ 12,044, ಕಾಪುವಿನಲ್ಲಿ ಲಾಲಾಜಿ ಮೆಂಡನ 11,917, ಬೈಂದೂರಿನಲ್ಲಿ ಬಿ.ಎಂ. ಸುಕುಮಾರ ಶೆಟ್ಟಿ 24,393 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ ಎಂದರು.
ವಿಧಾನ ಸಭಾ ಚುನಾವಣೆಯ ಫಲಿತಾಂಶ ಮುಂಬರುವ ನಗರಸಭಾ ಮತ್ತು ಲೋಕಸಭಾ ಚುನಾವಣೆಯ ಗೆಲುವಿಗೆ ಸ್ಪಷ್ಟ ದಿಕ್ಸೂಚಿಯಾಗಿದೆ. ನಗರ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತ ಸಾಧಿಸಿ ಮತ್ತೆ ನಗರಸಭೆ ಆಡಳಿತವನ್ನು ಕೈಗೆತ್ತಿಕೊಳ್ಳಲಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಇದ್ದ ಮೋದಿ ಅಲೆ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ವಿಧಾನಸಭೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಫಲಿತಾಂಶವೇ ಸಾಕ್ಷಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಗತ್ಯವಿರು ತಯಾರಿಯನ್ನು ಪಕ್ಷ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಯಶಪಾಲ್ ಸುವರ್ಣ,ಪ್ರವೀಣ್ ಕುಮಾರ್ ಕುಪ್ಪಟ್ಟು, ಶೀಶಾ ನಾಯಕ್ ಉಪಸ್ಥಿತರಿದ್ದರು.
‘ಬಿಜೆಪಿ ದ್ವೇಷದ ರಾಜಕಾರಣ ಮಾಡಲ್ಲ’
ಹಿಂದೆ ಆಡಳಿತದಲ್ಲಿ ಇದ್ದ ರಾಜ್ಯ ಸರ್ಕಾರ ಬಿಜೆಪಿ ಕಾರ್ಯಕರ್ತರಿಗೆ ಸಾಕಷ್ಟು ತೊಂದರೆ ನೀಡಿದೆ. ಹಾಗಂತ ಪಕ್ಷ ದ್ವೇಷದ ರಾಜಕಾರಣ ಮಾಡವುದಿಲ್ಲ. ಅಭಿವೃದ್ಧಿಗಾಗಿ ಹೆಚ್ಚಿನ ಮಹತ್ವ ನೀಡಲಿದ್ದೇವೆ. ಚುನಾವಣೆಯ ಪೂರ್ವದಲ್ಲಿ ಪ್ರಣಾಳಿಯಲ್ಲಿ ನೀಡಿದ ಭರವಸೆಯನ್ನು ಅಷ್ಠಾನಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ತಿಂಗಳಿಗೊಮ್ಮೆ 5 ಕ್ಷೇತ್ರದ ಶಾಸಕರನ್ನು ಕರೆದು ಅಭಿವೃದ್ಧಿಯ ಕುರಿತು ಚರ್ಚಿಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.