ಕೇರಳ ಚಲನಚಿತ್ರ ಅಕಾಡೆಮಿ ಪ್ರತಿವರ್ಷ ಆಯೋಜಿಸುವ ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಮೂಕ ನಾಯಕ’ ಚಿತ್ರ ಆಯ್ಕೆಯಾಗಿದೆ. ಜೂನ್ 8ರಿಂದ 11ರವರೆಗೆ ಈ ಚಿತ್ರೋತ್ಸವ ನಡೆಯಲಿದೆ.
ಮೂಕನಾಗಿರುವ ಚಿತ್ರಕಲಾವಿದನೊಬ್ಬನ ಅಭಿವ್ಯಕ್ತಿಯ ಕಥನವನ್ನು ಈ ಚಿತ್ರವು ಹೊಂದಿದೆ. ಮಾತು ಬಾರದ ಕಲಾವಿದ ತನ್ನ ಸುತ್ತಲಿನ ಪರಿಸರದ ಪ್ರಕ್ರಿಯೆಗಳಿಗೆ ಕುಂಚದ ಮೂಲಕವೇ ಪ್ರತಿಸ್ಪಂದನ ನೀಡುತ್ತಿರುತ್ತಾನೆ. ಹಾಗೆಯೆ ಪ್ರತಿರೋಧಕ್ಕೂ ಅವನಿಗೆ ಕುಂಚವೇ ಆಯುಧ. ಇಂಥದ್ದೊಂದು ಅಪರೂಪದ ವಸ್ತುವನ್ನಿಟ್ಟುಕೊಂಡು ಕಥೆ ಚಿತ್ರಕಥೆ ಹೆಣೆದು ನಿರ್ದೇಶಿಸಿದ್ದಾರೆ ಬರಗೂರು.
ಸೂರ್ಯ ಎಂಬ ಗ್ರಾಮೀಣ ಪ್ರದೇಶದ ಕಲಾವಿದ ಮತ್ತು ಆತನ ಅಕ್ಕ ಕಾವೇರಿಯ ಸುತ್ತಲೇ ಇಡೀ ಚಿತ್ರದ ಕಥೆ ಹೆಣೆಯಲ್ಪಟ್ಟಿದೆ. ಕುಮಾರ್ ಗೋವಿಂದ ಮತ್ತು ರೇಖಾ ಈ ಚಿತ್ರದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್, ಸುಂದರರಾಜು, ವೆಂಕಟರಾಜು, ಯತಿರಾಜು, ಭೋಗಾ ನರಸಿಂಹ ಮುಂತಾದವರು ತಾರಾಗಣದಲ್ಲಿದ್ದಾರೆ.
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
‘ಮೂಕ ನಾಯಕ’ ಚಿತ್ರವನ್ನು ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜಿಸಿಕೊಂಡಿದೆ.