ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಅತಂತ್ರ ಸ್ಥಿತಿ ನಾಳೆ ಕೇಂದ್ರದಲ್ಲೂ ಉಂಟಾಗಬಹುದು. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯ.
ಕೆಲವು ಸೆಲೆಬ್ರಿಟಿಗಳು ತಮ್ಮ ಜನಪ್ರಿಯತೆಯನ್ನು ಬಂಡವಾಳ ಮಾಡಿಕೊಂಡು ಹೊಸ ಪ್ರಾದೇಶಿಕ ಪಕ್ಷ ಆರಂಭಿಸುತ್ತಾರೆ. ವಿವಿಧ ಪಕ್ಷಗಳಿಂದ ಹೊರಬಂದ ಕೆಲವು ಅತೃಪ್ತರು ಸಹ ಹೊಸ ಪಕ್ಷ ಕಟ್ಟುವುದಿದೆ. ಇಂಥ ಪಕ್ಷಗಳು ಪ್ರಾದೇಶಿಕವಾಗಿ ಒಂದಿಷ್ಟು ಸದ್ದು ಮಾಡಿದರೂ, ರಾಷ್ಟ್ರೀಯ ಪಕ್ಷಗಳೆನಿಸುವ ಸಾಧ್ಯತೆ ಇಲ್ಲ.
ಸದ್ಯದ ರಾಜಕೀಯ ಸ್ಥಿತಿಯಲ್ಲಿ ಇಂಥ ಪಕ್ಷಗಳಿಂದ ಸ್ಪರ್ಧಿಸುವವರು ಗೆದ್ದು ಸರ್ಕಾರ ರಚಿಸುವುದು ಅಷ್ಟರಲ್ಲೇ ಇದೆ. ಅಪರೂಪಕ್ಕೆ ಒಂದೋ ಎರಡೋ ಸ್ಥಾನಗಳನ್ನು ಗೆದ್ದರೆ ಅದೇ ಸಾಧನೆ. ಆದರೆ ವೋಟುಗಳನ್ನು ಚದುರಿಸಿ ಫಲಿತಾಂಶ ಬದಲಿಸುವ ನಿಟ್ಟಿನಲ್ಲಿ ಇವು ದೊಡ್ಡ ಕಾಣಿಕೆ ಕೊಡುತ್ತಿವೆ. ಆ ಮೂಲಕ ಅತಂತ್ರ ಸ್ಥಿತಿ ನಿರ್ಮಾಣಕ್ಕೆ ಇಂಥ ಪಕ್ಷಗಳು ಹಾಗೂ ಪಕ್ಷೇತರರು ಕಾರಣರಾಗುತ್ತಾರೆ. ರಾಜಕೀಯ ವ್ಯವಸ್ಥೆ ಹೀಗಿರುವಾಗ ಪ್ರಜಾಪ್ರಭುತ್ವ ಹೇಗೆ ಯಶಸ್ವಿಯಾದೀತು?
ಈ ಸ್ಥಿತಿಯನ್ನು ಬದಲಿಸಿ, ಎರಡೇ ಪಕ್ಷಗಳಿರುವ ಚುನಾವಣಾ ವ್ಯವಸ್ಥೆ ಬಂದರೆ ನಮ್ಮ ಚುನಾವಣಾ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಲು ಸಾಧ್ಯವಿದೆ.