ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ಗೆ ಖಾರವಾದ ‘ಬ್ಯಾಡಗಿ’ ನಿರ್ಧಾರ!

ಶಾಸಕರಾಗಿದ್ದ ಬಸವರಾಜ ಶಿವಣ್ಣನವರ ಟಿಕೆಟ್ ತಪ್ಪಿಸಿದ ಹೈಕಮಾಂಡ್ ನಿಲುವು
Last Updated 19 ಮೇ 2018, 11:59 IST
ಅಕ್ಷರ ಗಾತ್ರ

ಹಾವೇರಿ: ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಬದಲಾವಣೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣ
ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.

ಬ್ಯಾಡಗಿ ಕ್ಷೇತ್ರದ ಶಾಸಕರಾಗಿದ್ದ ಬಸವರಾಜ ಶಿವಣ್ಣನವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿಸಿ, ಬಂಡಾಯ ಅಭ್ಯರ್ಥಿ ಎಸ್.ಆರ್.ಪಾಟೀಲಗೆ ನೀಡಲಾಗಿತ್ತು. ಅತ್ತ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಸೇರಿದ ವಿರೂಪಾಕ್ಷಪ್ಪ ಬಳ್ಳಾರಿ ಅವರನ್ನುಕಣಕ್ಕಿಳಿಸಿದ ಪರಿಣಾಮ, ಲಿಂಗಾಯತ ಸಮುದಾಯಕ್ಕೆ ಸೇರಿದ ಎರಡು ಒಳಪಂಗಡಗಳ ಮತಗಳು ಧ್ರುವೀಕರಣಗೊಂಡವು. ಈ ವಿದ್ಯಮಾನವು ಹಾವೇರಿ ಮತ್ತು ರಾಣೆಬೆನ್ನೂರು ಕ್ಷೇತ್ರದ ಮೇಲೂ ಪ್ರಭಾವ ಬೀರಿತು ಎಂಬ ಮಾತು ಕೇಳಿ ಬರುತ್ತಿದೆ.

ಅಲ್ಲದೇ, ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಎಸ್.ಆರ್. ಪಾಟೀಲ ಸ್ಪರ್ಧೆಯಲ್ಲಿ ಹಿನ್ನಡೆ ಅನುಭವಿಸಿ, ಜಿಲ್ಲೆ
ಯಲ್ಲೇ ಅತ್ಯಧಿಕ ಅಂತರದಿಂದ ಸೋಲು ಕಂಡರು.

ಇನ್ನೊಂದೆಡೆ, ಟಿಕೆಟ್ ವಂಚಿತ ಶಿವಣ್ಣನವರ ಸಮುದಾಯ ಮತ್ತು ಬೆಂಬಲಿಗರ ಮತಗಳು ಬ್ಯಾಡಗಿಯಲ್ಲಿ ‘ಕೈ’ ಕೊಟ್ಟಿತು.
ಅಷ್ಟು ಮಾತ್ರವಲ್ಲ, ಇದು ರಾಣೆಬೆನ್ನೂರಿನಲ್ಲಿ ಆರ್. ಶಂಕರ್‌ಗೆ ಮತ ಕ್ರೋಡೀಕರಿಸಲು ನೆರವಾಯಿತು. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರಿಗೆ ಹಿನ್ನಡೆಯಾಯಿತು ಎಂದು ಬ್ಯಾಡಗಿಯ ಕಾಂಗ್ರೆಸ್ ಮುಖಂಡ ವಿಶ್ಲೇಷಿಸಿದರು.

ಇತ್ತ ಬಸವರಾಜ ಶಿವಣ್ಣನವರ ತವರಾದ ಹಾವೇರಿ ಕ್ಷೇತ್ರದ ಮೇಲೂ ಪರಿಣಾಮ ಬೀರಿತು. ಶಿವಣ್ಣನವರ ಬಹುತೇಕ ಬೆಂಬಲಿಗರು ‘ಕೈ’ ಹಿಡಿಯಲಿಲ್ಲ. ಈ ಹಿನ್ನಡೆಯನ್ನು ಸರಿಪಡಿಸಲು ಶಿವಣ್ಣನವರೂ ಪೂರ್ಣ ಪ್ರಮಾಣದ ಪ್ರಯತ್ನ ನಡೆಸಲಿಲ್ಲ. ಇದು, ಹಾವೇರಿಯ ಬಿಜೆಪಿ ಅಭ್ಯರ್ಥಿ ನೆಹರು ಓಲೇಕಾರ ಅವರಿಗೆ ನೆರವಾಯಿತು. ಇನ್ನೊಂದೆಡೆ, ಬ್ಯಾಡಗಿ
ಲಿಂಗಾಯತ ಮತವಿಭಜನೆ ಪರಿಣಾಮ ಹಾವೇರಿ ಕ್ಷೇತ್ರದ ಮೇಲೂ ಪ್ರಭಾವ ಬೀರಿದ್ದು, ಲಿಂಗಾಯತ ಮತಗಳು ‘ಯಡಿಯೂರಪ್ಪ’ ಅವರ ಹೆಸರಿನಲ್ಲಿ ಕ್ರೋಡೀಕೃತಗೊಂಡವು.

ಕಾಂಗ್ರೆಸ್ ಪಕ್ಷದೊಳಗೆ ನಡೆದಿದೆ ಎನ್ನಲಾದ ಆಂತರಿಕ ಒಪ್ಪಂದದ ಪ್ರಕಾರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಬೇಕಿತ್ತು. ಆದರೆ, ಅವರು ಅಧಿಕಾರಕ್ಕೆ ಅಂಟಿ ಕುಳಿತು
ಕೊಂಡಿರುವುದು ಇತರ ಜಿಲ್ಲಾ ಪಂಚಾಯಿತಿ ಸದಸ್ಯರ ಅಸಮಾಧಾನಕ್ಕೆ ಕಾರಣ ಆಗಿದೆ. ಇದು ಜಿಲ್ಲಾ ಪಂಚಾಯ್ತಿಯ ಕೆಲ ಕಾಂಗ್ರೆಸ್ ಸದಸ್ಯರ ಕ್ಷೇತ್ರದ ಮತ ಗಳಿಕೆ ಪ್ರಮಾಣದಲ್ಲಿ ವ್ಯಕ್ತವಾಗಿದೆ.

ಇಂಥ ಬೆಳವಣಿಗೆಗಳ ಕಾರಣ ಲಿಂಗಾಯತ ಒಳಪಂಗಡವೊಂದು ಬ್ಯಾಡಗಿ ಮತ್ತು ಹಾವೇರಿಯಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಎಲ್ಲ ಸಮುದಾಯಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದರೂ, ಹಾವೇರಿ ಕಾಂಗ್ರೆಸ್‌ ಅಭ್ಯರ್ಥಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಸೋಲು ಕಂಡರು.

ಒಟ್ಟಾರೆ, ಬ್ಯಾಡಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಬದಲಾವಣೆ ಮೂರು ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿತು.
ಬ್ಯಾಡಗಿ ಕ್ಷೇತ್ರ ಹಾವೇರಿ ಮತ್ತು ರಾಣೆಬೆನ್ನೂರಿನ ಹಳ್ಳಿಗಳನ್ನು ಒಳಗೊಂಡಿದ್ದು,ಸಹಜವಾಗಿಯೇ ಕೊಡುಕೊಳ್ಳುವಿಕೆಯ ಸಂಬಂಧವಿದೆ.

‘ಜಿಲ್ಲೆಯಲ್ಲಿ ಬೀಸಿದ ಬಿಜೆಪಿ ಗಾಳಿಯ ಪರಿಣಾಮ ಹಾನಗಲ್‌ನಲ್ಲಿ ಕಾಂಗ್ರೆಸ್ ಸೋಲಬೇಕಾಯಿತು’ ಎಂಬ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಹೇಳಿಕೆ ಮೇಲಿನ ವಿಶ್ಲೇಷಣೆಯನ್ನು ಪುಷ್ಟೀಕರಿಸುವಂತಿದೆ.

ರಾಣೆಬೆನ್ನೂರಿನಲ್ಲಿ ನಾವು ಅತಿಯಾಗಿ ನಂಬಿದ ಮತಗಳೂ ನಮಗೆ ಕೈ ಕೊಟ್ಟವು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಏಕನಾಥ ಭಾನುವಳ್ಳಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT