ಶ್ರೀನಗರ: ಇನ್ನೂ ಒಂದೂವರೆ ವರ್ಷದಲ್ಲಿ ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವ ಪ್ರಧಾನಿ, ಇಲ್ಲಿ ಆಯೋಜಿಸಲಾಗಿದ್ದ ಬೌದ್ಧ ಧರ್ಮಗುರು ಬಕುಲ ರಿನ್ಪೊಚೆ ಅವರ ಜನ್ಮಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ವಿದ್ಯುತ್ ಸಂಪರ್ಕವಿಲ್ಲದ 4 ಕೋಟಿ ಮನೆ ದೇಶದಲ್ಲಿವೆ. ಅವುಗಳಿಗೆ ವಿದ್ಯುತ್ ಒದಗಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದರು.
ಸಮಾಜದ ಮುಖ್ಯವಾಹಿನಿಗೆ ಬನ್ನಿ: ಹಿಂಸೆಯ ಮಾರ್ಗ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಎಂದು ಜಮ್ಮು ಮತ್ತು ಕಾಶ್ಮೀರದ ‘ದಾರಿ ತಪ್ಪಿದ’ ಯುವಕರಲ್ಲಿ ಮೋದಿ ಮನವಿ ಮಾಡಿಕೊಂಡಿದ್ದಾರೆ.
‘ನೀವು ಕೈಗೆತ್ತಿಕೊಳ್ಳುವ ಪ್ರತಿಯೊಂದು ಕಲ್ಲು ಅಥವಾ ಆಯುಧ ರಾಜ್ಯವನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿದೆ’ ಎಂದು ಹೇಳಿದರು.
ಲಾಲ್ ಚೌಕ್ ಚಲೋ: ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿಯನ್ನು ವಿರೋಧಿಸಿ ಪ್ರತ್ಯೇಕತಾವಾದಿಗಳು ಹಮ್ಮಿಕೊಂಡಿದ್ದ ‘ಲಾಲ್ ಚೌಕ್’ ಚಲೋ ಕಾರ್ಯಕ್ರಮವನ್ನು ಪೊಲೀಸರು ಶನಿವಾರ ವಿಫಲಗೊಳಿಸಿದರು.
ಪ್ರತ್ಯೇಕತಾವಾದಿಗಳ ಕರೆಯಂತೆ ನೂರಾರು ಜನರು ಬಾದಶಹ ಚೌಕದಲ್ಲಿ ಸೇರಿದ್ದರು. ಅಲ್ಲಿಂದ ಲಾಲ್ ಚೌಕದತ್ತ ಸಾಗಲು ಪೊಲೀಸರು ಬಿಡಲಿಲ್ಲ. ಮುಖಂಡರು ಸೇರಿದಂತೆ ಅನೇಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಕಣಿವೆ ರಾಜ್ಯದಲ್ಲಿ ಕದನ ವಿರಾಮ ಘೋಷಿಸಿದ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.