ಸಂತೇಬೆನ್ನೂರು (ಚನ್ನಗಿರಿ ತಾ.): ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಕೇಳಿ ಆಘಾತಗೊಂಡ ಇಲ್ಲಿನ ನಿವಾಸಿ ಎಚ್.ಚನ್ನಬಸಪ್ಪ (75) ಅವರು ಶನಿವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದಾಗ ಚನ್ನಬಸಪ್ಪ ಅವರು ಸಿಹಿ ಹಂಚಿ ಸಂಭ್ರಮಿಸಿದ್ದರು. ಶನಿವಾರ ಬೆಳಿಗ್ಗೆಯಿಂದಲೇ ವಿಧಾನಸಭೆಯ ಕಲಾಪವನ್ನು ಟಿ.ವಿ. ಮುಂದೆ ಕುಳಿತು ವೀಕ್ಷಿಸಿದ್ದರು. ಯಡಿಯೂರಪ್ಪ ರಾಜೀನಾಮೆ ನೀಡಿದ್ದಕ್ಕೆ ಅವರು ತೀವ್ರ ನೊಂದುಕೊಂಡಿದ್ದರು ಎಂದು ಅವರ ಸ್ನೇಹಿತರು ಮಾಹಿತಿ ನೀಡಿದರು.
ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಕಿರಿಯ ಪುತ್ರ ವೈದ್ಯರಾಗಿದ್ದು, ದುಬೈನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭಾನುವಾರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು.
ಯಡಿಯೂರಪ್ಪ ಭೇಟಿ ಇಂದು: ‘ಅಭಿಮಾನಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂತೇಬೆನ್ನೂರಿಗೆ ಭೇಟಿ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದಾರೆ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.