ಬೆಂಗಳೂರು: ಕೆಲವು ಹಿರಿಯ ಸಚಿವರು ಈ ಬಾರಿ ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ನಾನು ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಕೊಟ್ಟರೆ ಬೇಡ ಎನ್ನುವುದಿಲ್ಲ’ ಎಂದು ಹೇಳಿದರು.
‘ಜಯನಗರದಲ್ಲಿ ಸೌಮ್ಯಾ ರೆಡ್ಡಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ತಿಳಿಸಿದರು.
ಸಚಿವ ಸ್ಥಾನದ ಆಕಾಂಕ್ಷಿ: ‘ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಮೂರು ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ನನಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ’ ಎಂದು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.
ಹಿಲ್ಟನ್ ರೆಸಾರ್ಟ್ ಬಳಿ ಮಾತನಾಡಿದ ಅವರು, ‘ವೀರಶೈವ ಮಹಾಸಭಾ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ಕೇಳುವುದರಲ್ಲಿ ತಪ್ಪೇನಿದೆ. ಸಮುದಾಯದ ಹಿತಕ್ಕಾಗಿ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ಹೇಳಿದರು.
‘ನನಗೆ ಬಿಜೆಪಿ ನಾಯಕರು ಅಮಿಷ ಒಡ್ಡಿದ್ದು ನಿಜ. ಮಾತನಾಡಿದ ಬಗ್ಗೆ ಒರಿಜಿನಲ್ ಆಡಿಯೊ ಇದೆ. ಸದನದಲ್ಲಿ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು’ ಎಂದು ಪ್ರಶ್ನಿಸಿದರು.
ಆಡಿಯೊ ನಕಲಿ ಎಂಬ ಬಿಜೆಪಿ ನಾಯಕರ ಆರೋಪ ನಿರಾಧಾರ ಎಂದು ಹೇಳಿದರು.
ನಾನು ಪೊಲೀಸ್ ಅಧಿಕಾರಿಯಾಗಿದ್ದವನು. ಆಡಿಯೊ ಅಸಲಿಯತ್ತು ಗೊತ್ತಿಲ್ಲವೇ. ಶ್ರೀರಾಮುಲು, ಮುರಳಿಧರ್ ರಾವ್, ಬಿಎಸ್ವೈ ಮಾತನಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಬಿ.ಸಿ.ಪಾಟೀಲ್ ಆರೋಪಿಸಿದರು.