ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಖಾಸಗಿ ಉಪಯೋಗಕ್ಕೆ ಬಳಸುವ ವಾಹನಗಳಲ್ಲಿ ಕೆಲವು ಮಾಲೀಕರು ಪ್ರವಾಸಿಗರ ಬಾಡಿಗೆ ನಡೆಸುತ್ತಿದ್ದು, ಇದರಿಂದ ಹಳದಿ ಫಲಕ ಹೊಂದಿರುವ ಪ್ರವಾಸಿ ಟ್ಯಾಕ್ಸಿ ಮಾಲೀಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಟ್ಯಾಕ್ಸಿ ಮಾಲೀಕ ಸುಂದ್ರೇಶ್ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ಕಾನೂನಿನ ಪ್ರಕಾರ ಹಳದಿ ಬಣ್ಣದ ಬೋರ್ಡ್ ಹೊಂದಿರುವ ವಾಹನಗಳು ಮಾತ್ರ ಪ್ರವಾಸಿಗರ ಬಾಡಿಗೆ ನೀಡುವ ನಿಯಮವಿದೆ. ಆದರೆ, ಪಟ್ಟಣದಲ್ಲಿ 25 ಕ್ಕೂ ಅಧಿಕ ಬಿಳಿ ಬಣ್ಣದ ಬೋರ್ಡ್ ಹೊಂದಿರುವ ಖಾಸಗಿ ಸ್ವಂತ ವಾಹನಗಳು ಸಾರಿಗೆ ಇಲಾಖೆ ನಿಯಮ ಉಲ್ಲಂಘಿಸಿ ಪ್ರವಾಸಿಗರ ಬಾಡಿಗೆ ನಡೆಸುತ್ತಿದ್ದಾರೆ.
ಇದರಿಂದ ಹಳದಿ ಬೋರ್ಡ್ ಹೊಂದಿ ಕ್ರಮವಾಗಿ ಸರ್ಕಾರಕ್ಕೆ ತೆರಿಗೆ, ವಿಮೆ ಇತ್ಯಾದಿ ಪಾವತಿಸಿಕೊಂಡು ಬರುತ್ತಿರುವ ನಮಗೆ ತೀವ್ರ ನಷ್ಟವಾಗುತ್ತಿದೆ.ಸ್ವಂತ ಬಳಕೆಯ ವಾಹನದ ಮಾಲೀಕರುಗಳು ಪಟ್ಟಣದ ಆಯ್ದ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಬಾಡಿಗೆ ಮಾಡುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆಯವರು ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಜಿಲ್ಲಾಧಿಕಾರಿ, ಸಾರಿಗೆ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮಕೈಗೊಂಡಿಲ್ಲ. ಎಸ್ಪಿ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಠಾಣೆಯಿಂದ ಈ ಕುರಿತು ತಮಗೆ ಹಿಂಬರಹ ನೀಡಿದ್ದು, ಠಾಣೆಯಿಂದ ಈ ಕುರಿತು ಪರಿಶೀಲನೆ ನಡೆಸಿದ್ದು, ಯಾವುದೇ ಸ್ವಂತ ಉಪಯೋಗದ ವಾಹನದವರು ಬಾಡಿಗೆ ಮಾಡುತ್ತಿಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಕೈ ತೊಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ನಾವುಗಳೇ ಖಾಸಗಿ ವಾಹನ ಮಾಲೀಕರು ಬಾಡಿಗೆ ಮಾಡುವ ಸಮಯದಲ್ಲಿ ಅಡ್ಡಗಟ್ಟಿ ತಡೆಯಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಟ್ಯಾಕ್ಸಿ ಚಾಲಕರಾದ ಶಶಿಕುಮಾರ್, ಮಂಜುನಾಥ, ನಿತ್ಯಾನಂದ, ಅಶೋಕ್, ಶ್ರೀನಿವಾಸ, ಪ್ರದೀಪ್, ಸುಜಯ್, ಜೋಸೆಫ್ ಮತ್ತಿತರರು ಇದ್ದರು.