ಬೆಂಗಳೂರು: ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ ನೀರು ರಸ್ತೆಯಲ್ಲೇ ನಿಂತಿದ್ದರಿಂದ ಸಿಲ್ಕ್ಬೋರ್ಡ್, ಬನ್ನೇರುಘಟ್ಟ ರಸ್ತೆ, ಇಬ್ಬಲೂರು ಇಕೋಸ್ಪೇಸ್ ಮತ್ತು ಕೆ.ಆರ್.ಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆ ತಲೆದೋರಿತು.
ಕಚೇರಿ ಬಿಡುವ ವೇಳೆಯಲ್ಲೇ ಮಳೆ ಆರಂಭವಾಗಿದ್ದರಿಂದ ಮನೆಗೆ ಹೋಗುವ ಧಾವಂತದಲ್ಲಿದ್ದ ಉದ್ಯೋಗಿಗಳು ತೊಂದರೆ ಅನುಭವಿಸಿದರು. ನಿತ್ಯವೂ ಇರುವ ಸಂಚಾರ ದಟ್ಟಣೆಯೊಂದಿಗೆ ರಸ್ತೆಯಲ್ಲಿ ಮಳೆ ನೀರೂ ನಿಂತಿದ್ದರಿಂದ ಸಮಸ್ಯೆ ದುಪ್ಪಟ್ಟಾಗಿತ್ತು.
ಕೋರಮಂಗಲ 3ನೇ ಬ್ಲಾಕ್, ಲಾಲ್ಬಾಗ್, ಬೊಮ್ಮನಹಳ್ಳಿ, ಮಡಿವಾಳ ಜಂಕ್ಷನ್ನಲ್ಲಿ ಕಿಲೋಮೀಟರ್ ಗಟ್ಟಲೆ ದೂರದವರೆಗೂ ವಾಹನಗಳು ನಿಂತಿದ್ದವು. ಸವಾರರು ಗಂಟೆಗಟ್ಟಲೆ ವಾಹನಗಳಲ್ಲಿ ಕುಳಿತು ಕಿರಿಕಿರಿ ಅನುಭವಿಸಿದರು.
ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸಂಚಾರ ವಿಭಾಗದ ಪೊಲೀಸರು ಹರಸಾಹಸಪಟ್ಟರು. ಬನಶಂಕರಿ, ಸಾರಕ್ಕಿಯಲ್ಲಿ ಮಳೆಯಲ್ಲೇ ಕರ್ತವ್ಯ ನಿರ್ವಹಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಸಂಚಾರ ಪೊಲೀಸರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಮಳೆಯೊಂದಿಗೆ ಗಾಳಿಯೂ ಬೀಸಿದ್ದರಿಂದ ಡಬಲ್ ರೋಡ್, ಜೆ.ಪಿ. ನಗರ ನಾಲ್ಕನೇ ಹಂತ, ಯಲಹಂಕದ ಆಮ್ಕೊ ಬಡಾವಣೆ, ಭೂಪಸಂದ್ರ, ವೈಟ್ಫೀಲ್ಡ್ನಲ್ಲಿ ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.