ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ಬಿ.ಟೆಕ್ ಪ್ರವೇಶಕ್ಕೆ ದೇಶದಾದ್ಯಂತ ನಡೆಸಿದ್ದ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ.
ಬೆಂಗಳೂರಿನ ಇಂದಿರಾನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ಆರ್. ಮುರಳಿಕೃಷ್ಣನ್ ಮೊದಲ ರ್ಯಾಂಕ್ ಪಡೆದಿದ್ದಾರೆ. ಅದೇ ಶಾಲೆಯ ನಂದಗೋಪಾಲ ವಿಧು ಎರಡನೇ ಹಾಗೂ ಯಲಹಂಕ ನ್ಯೂಟೌನ್ ಚೇತನ ಪಿ.ಯು ಕಾಲೇಜಿನ ಪ್ರಣವ್ ಕೆ. ಶೆಟ್ಟಿ ಮೂರನೇ ರ್ಯಾಂಕ್ ಪಡೆದಿದ್ದಾರೆ.
ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್.ದೊರೆಸ್ವಾಮಿ ಬಿಡುಗಡೆ ಮಾಡಿದರು. ದೇಶದ 37 ಕೇಂದ್ರಗಳಲ್ಲಿ 16 ಸಾವಿರ ವಿದ್ಯಾರ್ಥಿಗಳು ‘ಪಿಇಎಸ್ಎಸ್ಎಟಿ–2017’ ಪ್ರವೇಶ ಪರೀಕ್ಷೆ ಬರೆದಿದ್ದರು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರವೇಶ ಪರೀಕ್ಷೆಗೆ ಹಾಜರಾದವರ ಸಂಖ್ಯೆ ಹೆಚ್ಚಿತ್ತು ಎಂದು ಅವರು ತಿಳಿಸಿದರು.
‘ಸಿಇಟಿ ಹಾಗೂ ಮ್ಯಾನೇಜ್ಮೆಂಟ್ ಕೋಟಾದಡಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದರ ಜೊತೆಗೆ ನಾವೇ ಪ್ರತ್ಯೇಕವಾಗಿ ಪ್ರವೇಶ ಪರೀಕ್ಷೆ ನಡೆಸಿ, ಆ ಮೂಲಕವೂ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿದ್ದೇವೆ. ಈ ಪ್ರವೇಶ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ ಇರುತ್ತದೆ’ ಎಂದು ಮಾಹಿತಿ ನೀಡಿದರು.
ಬಿ.ಟೆಕ್ (ಸಿ.ಎಸ್.ಇ, ಇ.ಸಿ.ಇ, ಎಂ.ಇ, ಇ.ಇ.ಇ, ಸಿ.ಇ ಮತ್ತು ಬಿ.ಟಿ) ಕೋರ್ಸ್ ಪ್ರವೇಶಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಜೂನ್ 2 ಮತ್ತು 3ರಂದು ಮೊದಲ ಸುತ್ತಿನ ಕೌನ್ಸೆಲಿಂಗ್ ನಡೆಸಲಾಗುವುದು.
ಉದ್ಯೋಗಾವಕಾಶ: ಒಟ್ಟು 1,579 ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಉದ್ಯೋಗ ಪಡೆದಿದ್ದಾರೆ. ಅದರಲ್ಲಿ 151 ವಿದ್ಯಾರ್ಥಿಗಳಿಗೆ ವಾರ್ಷಿಕ ₹12 ಲಕ್ಷ ವೇತನ ಸಿಗಲಿದೆ.