ರಾಯಚೂರು: ‘ಚುನಾವಣೆಗೂ ಮುನ್ನ ಕೊಟ್ಟ ಭರವಸೆಯಂತೆ, ಅಧಿಕಾರಕ್ಕೆ ಬಂದ 24 ಗಂಟೆಗಳೊಳಗಾಗಿ ರೈತರ ಸಾಲಮನ್ನಾ ಮಾಡದೇ ಹೋದರೆ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಹಸಿರುಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದ್ದಾರೆ.
‘ಚುನಾವಣೆಯಲ್ಲಿ ರೈತರಿಗೆ ಭರವಸೆ ನೀಡಿ ಮತಗಳನ್ನು ಪಡೆದಿರುವ ಕುಮಾರಸ್ವಾಮಿ, ಯಾವುದೇ ಕಾರಣಕ್ಕೂ ಅವರಿಗೆ ಮೋಸ ಮಾಡಬಾರದು. ಕೊಟ್ಟ ಮಾತಿಗೆ ತಪ್ಪಿದರೆ, ಅವರು ಹೋದೆಡೆ ರೈತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದು ತಿಳಿಸಿದ್ದಾರೆ.
‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ಇಡೀ ರೈತ ಸಮೂಹ ಕಾಯುತ್ತಿದೆ. ರೈತರ ಆಶಾಕಿರಣವಾಗಿ ಗಮನ ಸೆಳೆದಿರುವ ಜೆಡಿಎಸ್ ಪಕ್ಷವು ಅವರಿಗೆ ನಿರಾಸೆ ಮಾಡಬಾರದು’ ಎಂದಿದ್ದಾರೆ.