ಬೆಂಗಳೂರು: ‘ಜೀವವೈವಿಧ್ಯ ಕಾನೂನು ರೂಪುಗೊಂಡ ಕಾಲಕ್ಕೂ ಅನುಷ್ಠಾನವಾದ ಸಮಯಕ್ಕೂ ಸಾಕಷ್ಟು ಬದಲಾವಣೆಗಳು ಆಗಿರುವುದರಿಂದ ಈಗ ಅವು ಅಪ್ರಸ್ತುತವಾಗಿವೆ’ ಎಂದು ರಾಷ್ಟ್ರೀಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪಶುಪತಿ ಅಭಿಪ್ರಾಯಪಟ್ಟರು.
ರಾಜ್ಯ ಜೀವವೈವಿಧ್ಯ ಮಂಡಳಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾ
ಡಿದ ಅವರು, ಜೀವವೈವಿಧ್ಯ ಕಾನೂನಿನಲ್ಲಿರಬೇಕಾದ ಅಂಶಗಳ ಬಗ್ಗೆ 1993 ರಿಂದ 2002ರ ಅವಧಿಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು. ಆಗ ನಮ್ಮ
ಲ್ಲಿದ್ದ ಆರ್ಥಿಕ ವ್ಯವಸ್ಥೆಯೇ ಬೇರೆ, ಈಗಿರುವ ಸ್ಥಿತಿಯೇ ಬೇರೆ. ಇದರಿಂದ ಆಗಿನ ಕಾನೂನಿನ ನಿಬಂಧನೆಗಳು ಈಗ ಅನ್ವಯವಾಗುವುದಿಲ್ಲ ಎಂದು ತಿಳಿಸಿದರು.
ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರೂ ತಂತ್ರಜ್ಞಾನದ ಬೆನ್ನು ಬಿದ್ದಿರಬೇಕಾದರೆ ಸಂರಕ್ಷಣೆಗಾಗಿ ಯಾರೂ ಬರುತ್ತಿಲ್ಲ. ಆದರೆ, ಈ ಕ್ಷೇತ್ರದಲ್ಲೂ ಪ್ರಗತಿಯಾಗುತ್ತಿದೆ ಎಂಬುದನ್ನು ಯುವಜನತೆಗೆ ತಿಳಿಸಬೇಕಿದೆ. ಕೇಂದ್ರ ಸರ್ಕಾರ ಜೀವವೈವಿಧ್ಯಕ್ಕಾಗಿ ಸುಮಾರು ₹15 ಸಾವಿರ ಕೋಟಿ ಹಣ ವೆಚ್ಚ ಮಾಡಿದೆ ಎಂದರು.
ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ‘ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಠ್ಯದಲ್ಲಿ ಜೀವ ವೈವಿಧ್ಯದ ಕುರಿತು ಮಾಹಿತಿ ನೀಡಬೇಕು. ಜೊತೆಗೆ ಮಂಡಳಿಗಾಗಿ ಪ್ರತ್ಯೇಕ ಕಟ್ಟಡದ ಅಗತ್ಯವಿದ್ದು, ಅದನ್ನು ಸರ್ಕಾರ ಒದಗಿಸಬೇಕು’ ಎಂದು ಕೋರಿದರು.
ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ವಿದ್ಯಾವಂತರಿಗಿಂತ ಅವಿದ್ಯಾವಂತರೇ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತಾರೆ. ಶಾಲೆಗಳಲ್ಲಿ ಮಕ್ಕ
ಳಿಗೆ ಈ ಬಗ್ಗೆ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಹೇಳಿದರು.
ಸಂಡೂರು ಜೀವವೈವಿಧ್ಯ ಸಮಿತಿಯ ವಿಶ್ವಮೂರ್ತಿ, ‘ಜೀವವೈವಿಧ್ಯ ಸಂಪನ್ಮೂಲಗಳ ಕುರಿತ ಪಾರಂಪರಿಕ ಅಮೂಲ್ಯ ಜ್ಞಾನ ಭಂಡಾರ ನಮ್ಮಲ್ಲಿದ್ದು, ಅದನ್ನು ದಾಖಲಿಸುವ ಕೆಲಸವನ್ನು ಮಂಡಳಿ ಮಾಡಬೇಕು’ ಎಂದು ಒತ್ತಾಯಿಸಿದರು.
ಈ ಬಾರಿಯ ಘೋಷ ವಾಕ್ಯ ‘ಭೂಮಿಯ ಮೇಲಿನ ಜೀವಿಗಳನ್ನು ಸಂರಕ್ಷಿಸಿ’ ಎನ್ನುವುದಿದೆ. ಅದರ ಜೊತೆಗೆ ‘ಸಂರಕ್ಷಣೆಗಾಗಿ ಅಭಿವೃದ್ಧಿ, ಅಭಿವೃದ್ಧಿಗಾಗಿ ಸಂರಕ್ಷಣೆ’ಯನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜೀವವೈವಿಧ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ.ಸೈಯದ್ ಅಬ್ರಾಹಂ, ರುದ್ರಪ್ಪ, ಲಕ್ಷ್ಮಿ ಬಾಯಿ ಜುಲಫಿ ಹಾಗೂ ಸಂಡೂರು ಜೀವವೈವಿಧ್ಯ ಸಮಿತಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ. ಜೀವವೈವಿಧ್ಯಮಯ ವಿಷಯದ ಕುರಿತು ನಡೆಸಿದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.