ಶಿವಮೊಗ್ಗ: ಸಾಗರ ತಾಲ್ಲೂಕಿನ ಶಿರವಂತೆ ಗ್ರಾಮದ ಮಿಥುನ್ ಅವರಿಗೆ ಎರಡು ದಿನಗಳಿಂದ ಜ್ವರ ಕಾಣಿಸಿಕೊಂಡಿದ್ದು, ಅವರ ಮನೆಯಲ್ಲಿ ವಿಚಾರಿಸಿದಾಗ ಮಿಥುನ್ ಕೇರಳಕ್ಕೆ ಹೋಗಿ ಬಂದ ಮಾಹಿತಿ ದೊರೆತಿದೆ.
ನಿಫಾ ವೈರಸ್ ತಗಲಿರುವ ಶಂಕೆಯ ಮೇರೆಗೆ ವೈದ್ಯರು ಮಿಥುನ್ರ ರಕ್ತದ ಸ್ಯಾಂಪಲ್ ಪಡೆದುಕೊಂಡು ಪರೀಕ್ಷೆಗಾಗಿ ಪುಣೆಗೆ ಕಳುಹಿಸಿದ್ದಾರೆ. ಆಸ್ಪತ್ರೆಗೆ ಬಂದು ದಾಖಲಾಗುವಂತೆ ವೈದ್ಯರು ಮಿಥುನ್ಗೆ ತಿಳಿಸಿದರೂ ಇಲ್ಲಿಯವರೆಗೆ ಆಸ್ಪತ್ರೆಗೆ ದಾಖಲಾಗಿಲ್ಲ.
ಮರತ್ತೂರು ಗ್ರಾಮದ ಬಾವಿಯಲ್ಲಿ ಎರಡು ಬಾವಲಿ ಸತ್ತು ಬಿದ್ದಿವೆ. ಹಾಗಾಗಿ ಇಬ್ಬರು ಸ್ಥಳೀಯರ ರಕ್ತದ ಸ್ಯಾಂಪಲ್ ಕೂಡ ಪುಣೆಗೆ ಕಳುಹಿಸಲಾಗಿದೆ.
ಸಾರ್ವಜನಿಕರು ವಿಪರೀತ ಜ್ವರ, ಕೆಮ್ಮು ಬಂದರೆ ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ.