ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಘಟಕಕ್ಕೆ ವಿದ್ಯುತ್‌ ಕಡಿತಕ್ಕೆ ವಿರೋಧ

ಅಪ್ಪೇಗೌಡನಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ; ಕೊಡ ಹಿಡಿದು ಮಹಿಳೆಯರ ಪ್ರತಿಭಟನೆ
Last Updated 25 ಮೇ 2018, 7:12 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡ ನಹಳ್ಳಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕದ ವಿದ್ಯುತ್‌ ಸಂಪರ್ಕವನ್ನು ಕಡಿತ ಗೊಳಿಸಿರುವುದರಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡು ವಂತಾಗಿದ್ದು, ಗುರುವಾರ ಮಹಿಳೆಯರು ಖಾಲಿ ಕೊಡ ಮತ್ತು ಕ್ಯಾನ್‌ ಹಿಡಿದು ಪ್ರತಿಭಟಿಸಿದರು.

ಸರ್ಕಾರದಿಂದ ಟೆಂಡರ್‌ ಮೂಲಕ ಅವಕಾಶ ಪಡೆದ ಫಾಂಟಸ್‌ ಕಂಪನಿಯು ಶುದ್ಧ ನೀರಿನ ಘಟಕವನ್ನು ಅಪ್ಪೇಗೌಡನಹಳ್ಳಿಯಲ್ಲಿ ಒಂದು ವರ್ಷದ ಹಿಂದೆ ಸ್ಥಾಪಿಸಿತ್ತು. ಸರ್ಕಾರದ ನಿಯಮದಂತೆ ಐದು ವರ್ಷಗಳ ಕಾಲ ಕಂಪೆನಿಯೇ ಅದರ ನಿರ್ವಹಣೆ ಮಾಡಬೇಕು. ವಿದ್ಯುತ್‌ ಮೀಟರನ್ನು ಅಳವಡಿಸಬೇಕಿದೆ. ಆದರೆ ವರ್ಷವಾದರೂ ವಿದ್ಯುತ್‌ ಮೀಟರ್‌ ಅಳವಡಿಸದ ಕಾರಣ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.

‘ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮುಂದಿನ ತಿಂಗಳಿಗೆ ಒಂದು ವರ್ಷವಾಗುತ್ತದೆ. ಕಂಪನಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಯಂತ್ರದಲ್ಲಿ ಎಟಿಡಬ್ಲು ಎಂಬ ಉಪಕರಣ ಕೆಲಸ ಮಾಡುತ್ತಿಲ್ಲ. ಫಿಲ್ಟರ್‌ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಬದಲಿಸಬೇಕು. ಆದರೆ ಅದನ್ನು ಬದಲಿಸಿಲ್ಲ. ಯುಬಿ ಫಿಲ್ಟರ್‌ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೀರಿನ ಟ್ಯಾಂಕ್‌ಗೆ ಮುಚ್ಚಳವೇ ಇಲ್ಲ. ಫಿಲ್ಟರ್‌ ಒಳಗೆ ಪಾಚಿಕಟ್ಟಿದೆ, ಶುಚಿಗೊಳಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ. ತ್ಯಾಗರಾಜ್‌ ಆರೋಪಿಸಿದರು.

‘ವಿದ್ಯುತ್‌ ಮೀಟರ್‌ ಅಳವಡಿಸದ ಕಾರಣ ಇದುವರೆಗೂ ಮೂರು ಬಾರಿ ಬೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಬಂದಿದ್ದರು. ನಮ್ಮ ವಿನಂತಿಯನ್ನು ಮನ್ನಿಸಿ ಸುಮ್ಮನಾಗಿದ್ದರು. ಆದರೆ ಎಷ್ಟು ಕಾಲ ಉಚಿತ ವಿದ್ಯುತ್‌ ನೀಡುತ್ತಾರೆ. ಈಗ ಕಡಿತ ಗೊಳಿಸಿದ್ದಾರೆ’ ಎಂದು ಸಮಸ್ಯೆ ಬಗ್ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿಯಿಂದ ನಾವು ಶುದ್ಧ ನೀರಿನ ಘಟಕಕ್ಕೆ ಸ್ಥಳ ನೀಡಿದ್ದೇವೆ. ವಿದ್ಯುತ್‌ ಮೀಟರ್‌ ಅಳವಡಿಸಲು ಎನ್‌.ಒ.ಸಿ ಪಂಚಾಯಿತಿ ವತಿಯಿಂದ ಕೊಟ್ಟು ಒಂಭತ್ತು ತಿಂಗಳಾಯಿತು. ಆದರೆ ಅದರ ಬಗ್ಗೆ ಯಾವ ಪ್ರಯತ್ನವನ್ನೂ ಅವರು ಮಾಡಿಲ್ಲ. ಫಾಂಟಸ್‌ ಕಂಪೆನಿಯ ಜಿಲ್ಲಾ ಉಸ್ತುವಾರಿ ವ್ಯವಸ್ಥಾಪಕ ಮೋಹನ್‌ ಅವರನ್ನು ಈ ಬಗ್ಗೆ ಕೇಳಿದರೆ ಅವರು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ ಕೇಶವಮೂರ್ತಿ ಅವರಿಗೆ ಒಪ್ಪಿಸಿದ್ದೇವೆ ಎನ್ನುವರು. ಕೇಶವಮೂರ್ತಿ ಅವರನ್ನು ಕೇಳಿದಾಗಲೆಲ್ಲಾ ಮಾಡಿಸುತ್ತೇನೆ ಎನ್ನುತ್ತಾರೆ. ಆದರೆ ಏನೂ ಮಾಡಿಲ್ಲ. ಫಾಂಟಸ್‌ ಕಂಪನಿಯ ಬೆಂಗಳೂರು ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಸಮಸ್ಯೆಯ ಬಗ್ಗೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾರ ಬಳಿ ದೂರು ಹೇಳುವುದು’ ಎಂದು ವಿವರಿಸಿದರು.

ಸ್ಮಾರ್ಟ್‌ ಕಾರ್ಡ್‌ ಅಳವಡಿಸುವ ಅವಕಾಶವಿದ್ದರೂ ಇಲ್ಲಿ ಅದನ್ನು ಬಳಕೆ ಮಾಡುತ್ತಿಲ್ಲ. ಸಾಧಾರಣ ಕಾರ್ಡುಗಳನ್ನು ಮುದ್ರಿಸಿ ನೀರು ಪಡೆಯಲು ಬರುವವರಿಂದ ಕಾರ್ಡಿಗೆ ₹ 60 ಪಡೆದು, ನಂತರ ಪ್ರತಿ 20 ಲೀಟರ್‌ ನೀರಿಗೆ ₹ 2 ಪಡೆಯಲಾಗುತ್ತಿದೆ.

ಅಪ್ಪೇಗೌಡನಹಳ್ಳಿಯ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀ ಯರಲ್ಲದೆ, ಕಂಬದಹಳ್ಳಿ, ಗಂಗನಹಳ್ಳಿ, ಚೌಡಸಂದ್ರ, ಮೇಲೂರಿನಿಂದಲೂ ಬಂದು, ಕೆಲವರಂತೂ ಆಟೊದಲ್ಲಿ ಕ್ಯಾನುಗಳನ್ನು ತಂದು ನೀರು ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಈಗ ಇವರೇ ಕುಡಿಯುವ ನೀರಿಗಾಗಿ ಬೇರೆ ಕಡೆ ಹೋಗಬೇಕಾಗಿದೆ.

‘ನಾಲ್ಕು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ ಕೊಳವೆ ಬಾವಿಯ ನೀರನ್ನು ಹಾಗೆಯೇ ಬಳಸುತ್ತಿದ್ದೇವೆ. ಆಗಲೇ ಮೈ ಕೈ ಎಲ್ಲಾ ದದ್ದು, ಕೆರೆತದಿಂತ ಅಲರ್ಜಿ ಆಗಿದೆ. ಮಕ್ಕಳಿಗೆ ಕಾಯಿಲೆಗಳು ಬರುತ್ತಿದ್ದು ಆಸ್ಪತ್ರೆಗೆ ಹೋಗುವಂತಾಗಿದೆ. ಇನ್ನು ನಾವು ಶುದ್ಧ ನೀರು ಬೇಕೆಂದರೆ ಹಂಡಿಗನಾಳ, ಕೇಶವಾರ, ಕಡಿಶೀಗೇನಹಳ್ಳಿಗೆ ಹೋಗಿ ₹ 5 ನಾಣ್ಯ ಹಾಕಿ ತರಬೇಕು. ಸರಿಯಾಗಿ ನಿರ್ವಹಣೆ ಮಾಡದೆ ತೊಂದರೆ ಮಾಡಿರುವ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ಕಂಪೆನಿಯವರು ಶುದ್ಧ ನೀರಿನ ಘಟಕಗಳನ್ನು ತಾಲ್ಲೂಕಿನ ಸೊಣ್ಣಗಾನಹಳ್ಳಿ, ಬಳುವನಹಳ್ಳಿ, ಕೆ.ಜಿ. ಪುರ, ಬೈಯಪ್ಪನಹಳ್ಳಿಯಲ್ಲೂ ಸ್ಥಾಪಿಸಿದೆ., ಅಲ್ಲೂ ಹಲವು ಸಮಸ್ಯೆಗಳಿವೆ. ಇದು ಹೀಗೆ ಮುಂದುವರಿದರೆ ಸ್ತ್ರೀ ಶಕ್ತಿ ಸದಸ್ಯರೆಲ್ಲಾ ತಾಲ್ಲೂಕು ಆಡಳಿತದ ಮುಂದೆ ಪ್ರತಿಭಟಿಸುತ್ತೇವೆ’ ಎಂದು ಗ್ರಾಮದ ರತ್ನಮ್ಮ ತಿಳಿಸಿದರು.

ಗ್ರಾಮದ ಕಮಲಮ್ಮ, ಭಾರತಮ್ಮ, ರಾಧಾ, ಶೋಭಾ, ಸೌಮ್ಯಾ, ಶೈಲಜಾ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT