ಬೆಂಗಳೂರು: ವೇತನ ನೀಡದಿರುವುದನ್ನು ಖಂಡಿಸಿ ಪೌರಕಾರ್ಮಿಕರು ಡಾ. ಬಿ.ಆರ್.ಅಂಬೇಡ್ಕರ್ ದಲಿತ ಪೌರ ಕಾರ್ಮಿಕ ಮಹಾಸಂಘದ ಸದಸ್ಯರು ಬ್ಯಾಟರಾಯನಪುರದಲ್ಲಿರುವ ಯಲಹಂಕ ಬಿಬಿಎಂಪಿ ವಲಯ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದರು.
ಯಲಹಂಕದ ಎನ್.ಇ.ಎಸ್ ವೃತ್ತದಿಂದ ಪಾದಯಾತ್ರೆಯಲ್ಲಿ ತೆರಳಿದ ನೂರಾರು ಕಾರ್ಯಕರ್ತರು, ಯಲಹಂಕ ವಲಯಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಗಂಗಾಧರ್, ಐದು ತಿಂಗಳಿಂದ ಬಿಬಿಎಂಪಿ ವೇತನ ನೀಡದೆ ಸತಾಯಿಸುತ್ತಿದೆ. ವೇತನ ಸಿಗದೇ ಇರುವುದರಿಂದ ಮನೆ ಬಾಡಿಗೆ, ವಿದ್ಯುತ್ ಬಿಲ್ ತುಂಬಲು ಸಾಧ್ಯವಾಗದೆ ಕಾರ್ಮಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸದೆ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.
‘ಪೌರ ಕಾರ್ಮಿಕರಲ್ಲಿಯೇ ಚಾಲಕ, ಸೇವಕ, ಕಾರ್ಮಿಕ ಎಂದು ತರಹೇವಾರಿ ವರ್ಗೀಕರಣ ಮಾಡಿ ಅಧಿಕಾರಿಗಳು ಕಾರ್ಮಿಕ ಒಗ್ಗಟ್ಟು ಒಡೆಯುವ ಸಂಚು ರೂಪಿಸಿದ್ದಾರೆ. ಇದೂ ಅಲ್ಲದೆ, ಬಯೋಮೆಟ್ರಿಕ್ ನೆಪವೊಡ್ಡಿ ನೂರಾರು ಕಾರ್ಮಿಕರಿಗೆ ವೇತನ ನೀಡದೆ ಸತಾಯಿಸುತ್ತಿದ್ದಾರೆ’ ಎಂದರು.
ಯಲಹಂಕ ವಲಯ ಕಚೇರಿಯ ಜಂಟಿ ಆಯುಕ್ತ ನಾಗರಾಜ್ ಪ್ರತಿಕ್ರಿಯಿಸಿ, ವಿಧಾನಸಭೆ ಚುನಾವಣೆಗಾಗಿ ಬಿಬಿಎಂಪಿ ನೌಕರರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹಾಗಾಗಿ ವಿಳಂಬವಾಗಿದೆ. ಶೀಘ್ರದಲ್ಲೇ ವೇತನ ದೊರೆಯಲಿದೆ ಎಂದರು.