ಬೆಂಗಳೂರು: ಕನ್ನಡ ಕಥೆಗಳ ಲೋಕವನ್ನು ಅನಾವರಣಗೊಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಕಾಶವಾಣಿ ‘ಕಥಾ ಕಣಜ’ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಇದೇ 28ರಿಂದ ಪ್ರಾರಂಭಿಸುತ್ತಿದೆ.
ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರಧಾನ ಸಂಪಾದಕತ್ವದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದಿದ್ದ ‘ಶತಮಾನದ ಸಣ್ಣಕಥೆಗಳು’ ಸಂಕಲನ ಈ ಕಥಾ ಕಣಜ ಮಾಲಿಕೆಗೆ ಪ್ರಧಾನ ಆಕರವಾಗಿದೆ. ಜೊತೆಗೆ ಎಸ್.ದಿವಾಕರ್ ಹಾಗೂ ಜಿ.ಎಚ್.ನಾಯಕ್ ಅವರು ಸಂಪಾದಿಸಿರುವ ಕಥಾ ಸಂಕಲನಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.
ಒಂದು ವರ್ಷ ಬಿತ್ತರಗೊಳ್ಳುವ ಈ ಮಾಲಿಕೆಯಲ್ಲಿ 52 ಕಥೆಗಳು ಪ್ರತಿವಾರ ಪ್ರಸಾರವಾಗಲಿವೆ. ಕಥೆಗಾರನ ಮಾತು, ಕಥೆಯ ಓದು, ಹಿರಿಯ ಸಾಹಿತಿಗಳಿಂದ ವಿಮರ್ಶೆ ಹಾಗೂ ಪೂರಕ ಸಂಗೀತವನ್ನು ಕಾರ್ಯಕ್ರಮ ಒಳಗೊಂಡಿರುತ್ತದೆ. 19 ಜನ ಸಾಹಿತಿಗಳು ಕಥಾ ವಿಮರ್ಶಕರಾಗಿ ಭಾಗವಹಿಸಲಿದ್ದಾರೆ.
ಯಾವಾಗ ಪ್ರಸಾರ?: ಪ್ರತಿ ಸೋಮವಾರ ಎಫ್.ಎಂ rainbow 101.3 mhz ನಲ್ಲಿ ಬೆಳಿಗ್ಗೆ 8.02 ಗಂಟೆಗೆ, ಪ್ರತಿ ಬುಧವಾರ ಬೆಳಿಗ್ಗೆ 7.15 ಕ್ಕೆ ಕರ್ನಾಟಕದ ಎಲ್ಲ 13 ಬಾನುಲಿ ಕೇಂದ್ರಗಳು ಮತ್ತು ಬೆಂಗಳೂರು ಆಕಾಶವಾಣಿ ಮುಖ್ಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಪ್ರತಿ ಶುಕ್ರವಾರ ವಿವಿಧ ಭಾರತಿ ಎಫ್.ಎಂ 102.9 MHz ನಲ್ಲಿ 8.30 ಕ್ಕೆ ಮರುಪ್ರಸಾರವಾಗಲಿದೆ.