ಮುಂಬೈ: ದೇಶದ ಷೇರುಪೇಟೆಗಳಲ್ಲಿ ಚಂಚಲ ವಹಿವಾಟು ನಡೆದರೂ ಸೂಚ್ಯಂಕಗಳು ಅಲ್ಪ ಗಳಿಕೆ ಕಂಡುಕೊಂಡಿವೆ.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 76.57 ಅಂಶ ಏರಿಕೆ ಕಂಡು 34,924 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 8.75 ಅಂಶ ಹೆಚ್ಚಾಗಿ 10,605 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಹೂಡಿಕೆ ಚಟುವಟಿಕೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ ಏರಿಕೆ, ಕೈಗಾರಿಕಾ ಸೂಚ್ಯಂಕದ ಇಳಿಕೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಹಾಗೂ ರೂಪಾಯಿ ಮೌಲ್ಯದಲ್ಲಿನ ವ್ಯತ್ಯಯವೂ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಹೀಗಾಗಿ ಸೂಚ್ಯಂಕ ಹೆಚ್ಚು ಗಳಿಕೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.
ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ಬಂಡವಾಳ ಸರಕುಗಳು, ಆರೋಗ್ಯ ಸೇವೆ ಮತ್ತು ವಿದ್ಯುತ್ ವಲಯಗಳ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾದವು.
ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್, ಗ್ರಾಹಕ ಬಳಕೆ ವಸ್ತುಗಳು, ಎಫ್ಎಂಸಿಜಿ, ಲೋಹ, ವಾಹನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಶೇ 11.62 ರಷ್ಟು ಗಳಿಕೆ ಕಂಡುಕೊಂಡಿದೆ. ಭಾರ್ತಿ ಏರ್ಟೆಲ್ (ಶೇ 4.43), ಇನ್ಫೊಸಿಸ್ (ಶೇ 3.81) ರಷ್ಟು ಗರಿಷ್ಠ ಏರಿಕೆ ಕಂಡಿವೆ. ವಾರದ ವಹಿವಾಟಿನಲ್ಲಿ ಒಎನ್ಜಿಸಿ ಶೇ 5.24 ರಷ್ಟು ಗರಿಷ್ಠ ನಷ್ಟ ಕಂಡಿದೆ.