ಬೆಂಗಳೂರು: ಕೆಲವು ತಿಂಗಳುಗಳಿಂದ ಮಕ್ಕಳ ಗಾನಸುಧೆಯ ಮೂಲಕ ಕನ್ನಡ ನಾಡಿನ ಜನತೆಯನ್ನು ರಂಜಿಸಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 14 ರ ಫಿನಾಲೆಯ ವಿನ್ನರ್ ಆಗಿ ಇಟಗಿಯ ವಿಶ್ವಪ್ರಸಾದ್ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವಪ್ರಸಾದ್ ಟ್ರೋಫಿಯೊಂದಿಗೆ ಐದು ಲಕ್ಷ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ರನ್ನರ್ ಅಪ್ ಆಗಿ ಶಿಶು ತಾನ್ಸೇನ್ ಎಂದೇ ಖ್ಯಾತರಾಗಿದ್ದ ಬಳ್ಳಾರಿಯ ಜ್ಞಾನೇಶ್ವರ್ ಹಾಗೂ ಬೆಂಗಳೂರಿನ ಕೀರ್ತನಾ ಹೊರಹೊಮ್ಮಿದ್ದಾರೆ.
ಶನಿವಾರ ನಗರದ ಮಾನ್ಯತಾ ಟೆಕ್ ಪಾರ್ಕ್ನ ವೈಟ್ ಆರ್ಕಿಡ್ಸ್ ಸಭಾಭವನದಲ್ಲಿ ಫಿನಾಲೆ ಅದ್ದೂರಿಯಾಗಿ ನಡೆಯಿತು.
ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಚೆನ್ನಗಿರಿಯ ತೇಜಸ್ ಶಾಸ್ತ್ರೀ ಹಾಗೂ ಅಭಿಜಾತ್ ಪಡೆದುಕೊಂಡಿದ್ದಾರೆ. ತೇಜಸ್ ಕ್ವಾರ್ಟರ್ ಫೈನಲ್ನಲ್ಲಿಯೇ ನೇರವಾಗಿ ಫೈನಲ್ಗೆ ಆಯ್ಕೆಯಾಗಿದ್ದರು. ಇನ್ನು ನೇಹಾ ತಮ್ಮ ತೊದಲು ಗಾನದ ಮೂಲಕವೇ ಇಡೀ ಸೀಸನ್ ಪೂರ್ತಿ ಮನರಂಜನೆ ನೀಡಿದ್ದರು.
ಸಂಗೀತ ಮಹಾಗುರು ಹಂಸಲೇಖ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ 14 ರ ಸೀಸನ್ನ ತೀರ್ಪುಗಾರರಾಗಿದ್ದರು.