ಬೆಂಗಳೂರು: ನಿಫಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಗರದಲ್ಲಿರುವ ಹಂದಿಗಳ ಸಂಖ್ಯೆ ಪರಿಶೀಲಿಸಲು ಮುಂದಾಗಿದ್ದಾರೆ.
ಹಂದಿಗಳನ್ನು ಪರೀಕ್ಷಿಸಿ, ಸೋಂಕು ಮುಕ್ತಗೊಳಿಸಲು ನಗರಾಡಳಿತ ಮುಂದಾಗಿದೆ. ಕೇರಳದಲ್ಲಿ ಅನುಸರಿಸಿದ ಮಾದರಿಯನ್ನೇ ಇಲ್ಲಿಯೂ ಬಿಬಿಎಂಪಿ ಅನುಸರಿಸಿ ಸೋಂಕು ತಡೆಗಟ್ಟಲು ಮುಂದಾಗಿದೆ.
‘ನಗರದ ಹಂದಿಗಳನ್ನು ನಿರ್ವಹಿಸುವ ಕುರಿತು ತಜ್ಞರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗಿದೆ. ಇದಕ್ಕಾಗಿ ತಂಡವೊಂದನ್ನು ರಚಿಸಲಾಗುವುದು’ ಎಂದು ಮೇಯರ್ ಆರ್. ಸಂಪತ್ ರಾಜ್ ತಿಳಿಸಿದರು.
ಹಂದಿಗಳನ್ನು ವಾಸ ಸ್ಥಳದಿಂದ ತೆರವುಗೊಳಿಸಿ ಸೋಂಕುಮುಕ್ತಗೊಳಿಸಬೇಕಿದೆ. ವೈರಸ್ ಹರಡುವುದನ್ನು ಹೇಗೆ ತಡೆಗಟ್ಟಬಹುದು ಎಂಬ ಬಗ್ಗೆ ಚರ್ಚೆ ನಡೆದಿದೆ. ಸಂಪೂರ್ಣ ಹಂದಿ ನಿರ್ಮೂಲನೆಗೊಳಿಸುವ ಚಿಂತನೆ ಇಲ್ಲ. ಸೋಂಕುಪೀಡಿತ ಹಂದಿಗಳನ್ನು ಮಾತ್ರ ನಿರ್ಮೂಲನೆಗೊಳಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
‘ಹಂದಿ ಆವಾಸಗಳ ಮೇಲೆ ರಾಸಾಯನಿಕ ಮಿಶ್ರಣಗಳನ್ನು ಸಿಂಪಡಿಸುವ ಕುರಿತೂ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇವೆ. ನಗರದಲ್ಲಿ ಬಾವಲಿಗಳನ್ನು ನಿಯಂತ್ರಿಸುವ ಕ್ರಮಗಳ ಬಗೆಗೂ ಚಿಂತನೆ ಮಾಡಿದ್ದೇವೆ. ಹಂದಿ ಸಾಕಣೆದಾರರ ಜತೆಗೂ ಸಂಬಂಧಿಸಿದ ಇಲಾಖೆಗಳು ಮಾತುಕತೆ ನಡೆಸಲಿವೆ’ ಎಂದು ಅವರು ಹೇಳಿದರು.