ಬೆಂಗಳೂರು: ‘ಹತ್ತು ವರ್ಷಗಳಲ್ಲಿ ದಾಸರಹಳ್ಳಿಯನ್ನು ಮುನಿರಾಜು ಅಭಿವೃದ್ಧಿಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಹಿನ್ನಡೆಯಾಗಿರುವುದು ನಿಜ. ಆದರೆ, ಇಲ್ಲಿ ಜೆಡಿಎಸ್ ಗೆದ್ದಿರುವುದು ಸ್ವಂತ ಶಕ್ತಿಯಿಂದಲ್ಲ, ಕುತಂತ್ರದಿಂದ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕುಹಕವಾಡಿದರು.
ಪೀಣ್ಯದಾಸರಹಳ್ಳಿ ಸಮೀಪ ಬಾಗಲಗುಂಟೆಯಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
'ಮುನಿರಾಜು ಜೊತೆ ನಾನು, ಅಶೋಕ್ ಇದ್ದೇವೆ. ಯಾರು ಚಿಂತಿಸುವ ಅಗತ್ಯವಿಲ್ಲ. ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಜ್ಯ ವಿಧಾನಸಭಾ ಚುನಾವಣೆಯೂ ಬರುವ ಸಾಧ್ಯತೆಯಿದೆ’ ಎಂದರು.
ಶಾಸಕ ಆರ್.ಅಶೋಕ್ ಮಾತನಾಡಿ, 'ರಾಜ್ಯದಲ್ಲಿ 104 ಸ್ಥಾನ ಪಡೆದಿದ್ದೇವೆ. ಈ ಸರ್ಕಾರ ಯಾವಾಗ ಬೀಳುವುದೊ ಗೊತ್ತಿಲ್ಲ. ಈಗಾಗಲೇ ಬೆಂಕಿ ಹೊತ್ತಿಕೊಂಡಿದೆ. ಈ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ಕಂಡುಬಂದಿದೆ. ಮುಂದೆಯೂ ಚುನಾವಣೆಗಳು ಬರುತ್ತವೆ. ವಿಶ್ವಾಸ ಕಳೆದುಕೊಳ್ಳುವುದು ಬೇಡ. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡು ಕಾರ್ಯಪ್ರವೃತ್ತರಾಗಬೇಕು' ಎಂದರು.