ಶಿವಮೊಗ್ಗ: ರೈತರ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಬಂದ್ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟು ತೆರೆಯಲಾಗುತ್ತಿದೆ. ವಾಹನ ಸಂಚಾರ ಎಂದಿನಂತೆ ಇದೆ.
ಶಿವಮೊಗ್ಗ ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಎಂದಿನಂತೆ ಇದೆ. ಬೆಳಗ್ಗೆಯಿಂದ ಕೆಎಸ್ಆರ್’ಟಿಸಿ ಬಸ್’ಗಳು ದೂರದೂರುಗಳಿಗೆ ಸಂಚರಿಸುತ್ತಿವೆ. ಭದ್ರಾವತಿ - ಶಿವಮೊಗ್ಗ ನಡುವಿನ ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನಗರ ಸಂಚಾರ ಬಸ್ಗಳು ಕೂಡ ಇತರ ದಿನಗಳಂತೆಯೇ ಸಂಚರಿಸುತ್ತಿವೆ. ಆಟೋ, ಟ್ರಾಕ್ಸ್ ಸೇವೆಗಳು ಸಾಮಾನ್ಯ ದಿನದಂತೆಯೇ ಇವೆ.
ಜನ ಸಂಚಾರ ಎಂದಿನಂತೆಯೇ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಮತ್ತೊಂದೆಡೆ, ಬೆಳಗ್ಗೆ 10 ಗಂಟೆಯ ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.
ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಬಂದ್ ಅಷ್ಟೊಂದು ಪರಿಣಾಮ ಬೀರಿಲ್ಲ. ಬಸ್ ಸಂಚಾರ ವಿರಳವಾಗಿದೆ. ಶೇ 80ರಷ್ಟು ವಾಣಿಜ್ಯ ಸಂಕೀರ್ಣಗಳು ಕಾರ್ಯನಿರ್ವಹಿಸುತ್ತಿವೆ. ಬಿಜೆಪಿ ಕಾರ್ಯಕರ್ತರು ಬಸ್ ಗಳನ್ನು ತಡೆದು ನಿಲ್ಲಿಸಿದ್ದರಿಂದ ಧಾರವಾಡ ಬಳಿಯ ನವಲೂರು ಬಳಿ ಹತ್ತಾರು ಬಸ್ ಗಳು ನಿಂತಿದ್ದವು. ಕೆಲಕಾಲ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರ ಕಾರನ್ನು ತಡೆಯಲಾಗಿತ್ತು.