ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣ್ಣುಗಳ ರಾಜ’ನಿಗೆ ಭರಪೂರಿ ಸ್ವಾಗತ

ಮಾವು ಪ್ರಿಯರಿಗೆ ಹಬ್ಬ: ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ; ಮಕ್ಕಳಿಗೆ ಸಂಭ್ರಮ
Last Updated 28 ಮೇ 2018, 12:52 IST
ಅಕ್ಷರ ಗಾತ್ರ

ಕೋಲಾರ: ಹಣ್ಣುಗಳ ರಾಜನ ಪುರ ಪ್ರವೇಶವಾಗಿದ್ದು, ನಗರದ ಮಾರುಕಟ್ಟೆಗಳಲ್ಲಿ ಈಗ ಮಾವಿನ ಹವಾ ಜೋರಾಗಿದೆ. ರಸ್ತೆ ಬದಿಯ ಅಂಗಡಿಗಳಿಗೆ ರಾಶಿ ರಾಶಿಯಾಗಿ ಮಾವು ಹಣ್ಣುಗಳು ಬಂದಿಳಿದಿದ್ದು, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ.

ಹಾಲು ಗಲ್ಲದ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಹಾಗೂ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ರಸ್ತೆ ಬದಿಯ ಮಾವು ಹಣ್ಣಿನ ಅಂಗಡಿಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದು, ಮಾವು ಪ್ರಿಯರಿಗೆ ಹಬ್ಬವೋ ಹಬ್ಬ.

ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಇಟಿಸಿಎಂ ಆಸ್ಪತ್ರೆ, ಕಾಲೇಜು ವೃತ್ತ, ಎಂ.ಬಿ.ರಸ್ತೆ, ಡೂಂಲೈಟ್‌ ವೃತ್ತ, ಕ್ಲಾಕ್‌ ಟವರ್‌, ಎಂ.ಜಿ.ರಸ್ತೆ, ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಮುಂಭಾಗದ ರಸ್ತೆ, ಅಮ್ಮವಾರಿಪೇಟೆ ವೃತ್ತ, ಮಾರುಕಟ್ಟೆಗಳು ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಮಾವಿನ ಖದರ್. ನಗರದ ಗಲ್ಲಿ- ಗಲ್ಲಿಗಳಲ್ಲೂ ಈಗ ತಳ್ಳು ಗಾಡಿಗಳಲ್ಲಿ ಮಾವಿನದೇ ಕಾರುಬಾರು.

ಪ್ರತಿ ವರ್ಷ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಾವಿನ ಋತು ಆರಂಭವಾಗುತ್ತದೆ. ಮೇ ತಿಂಗಳಿಂದ ಜುಲೈವರೆಗೆ ಮಾವಿನ ಸುಗ್ಗಿ ಮುಂದುವರಿಯುತ್ತದೆ. ಮೂರು ತಿಂಗಳ ಕಾಲ ಮಾವು ವ್ಯಾಪಾರಿಗಳದು ಬಿಡುವಿಲ್ಲದ ದುಡಿಮೆ. ಈ ಅವಧಿಯಲ್ಲಿ ರಸ್ತೆ ಬದಿಯಲ್ಲಿ ಮಾವು ಹಣ್ಣಿನ ಅಂಗಡಿಗಳು ತಲೆ ಎತ್ತುವುದು ರೂಢಿ. ಹೆದ್ದಾರಿ ಅಕ್ಕಪಕ್ಕ, ಸರ್ವಿಸ್‌ ರಸ್ತೆ, ಹೆಚ್ಚಿನ ಜನಸಂದಣಿ ಇರುವ ರಸ್ತೆಗಳು, ಸರ್ಕಾರಿ ಕಚೇರಿಗಳ ಅಕ್ಕಪಕ್ಕದ ರಸ್ತೆಗಳು ಮಾವು ಮಾರಾಟಕ್ಕೆ ಪ್ರಶಸ್ತ ಸ್ಥಳಗಳು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಾವು ಬೆಳೆಗೆ ಏಷ್ಯಾ ಖಂಡದಲ್ಲೇ ಹೆಸರುವಾಸಿ. ಈ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಬಾರಿ ಶ್ರೀನಿವಾಸಪುರ ಸುತ್ತಮುತ್ತ ಮಾವು ಕೊಯ್ಲು ತಡವಾಗಿದ್ದು, ರಾಮನಗರ, ಮೈಸೂರು, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರಪ್ರದೇಶದಿಂದ ಪ್ರತಿನಿತ್ಯ ಲಾರಿಗಳಲ್ಲಿ ಲೋಡ್‌ಗಟ್ಟಲೇ ಹಣ್ಣುಗಳನ್ನು ನಗರಕ್ಕೆ ತರಿಸಲಾಗುತ್ತಿದೆ.

ಕೈಸುಡುವ ಬೆಲೆ: ಮಾವಿನಲ್ಲಿ ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ನೀಲಮ್‌, ಸಕ್ಕರೆಗುತ್ತಿ, ರಸಪುರಿ, ಬಾದಾಮಿ ತಳಿಯ ಹಣ್ಣುಗಳಿವೆ. ಬಾದಾಮಿ ಮತ್ತು ರಸಪುರಿ ತಳಿಯ ಹಣ್ಣುಗಳು ನೋಡಲು ಆಕರ್ಷಕ ಹಾಗೂ ತಿನ್ನಲು ರುಚಿಕರ. ಆದರೆ, ಬೆಲೆ ತುಸು ಹೆಚ್ಚು.

ತೋತಾಪುರಿ ಹಣ್ಣುಗಳ ಬೆಲೆ ಕಡಿಮೆ ಇದ್ದರೂ ರುಚಿಯ ಕಾರಣಕ್ಕೆ ಜನ ರಸಪುರಿ ಮತ್ತು ಬಾದಾಮಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ತೋತಾಪುರಿ ಹಣ್ಣುಗಳನ್ನು ಹೆಚ್ಚಾಗಿ ಜ್ಯೂಸ್‌ಗೆ ಬಳಸಲಾಗುತ್ತದೆ.

ನಗರದ ಮಾರುಕಟ್ಟೆಯಲ್ಲಿ ಸದ್ಯ ರಸಪುರಿ ಹಣ್ಣಿನ ಬೆಲೆ ಕೆ.ಜಿಗೆ ₹ 70, ಬಾದಾಮಿ ₹ 80, ರಾಜ್‌ಗಿರಾ 50, ಮಲಗೋವಾ ₹ 120 ಇದೆ. ಇತರ ತಳಿಯ ಹಣ್ಣುಗಳು ಅಲ್ಲೊಂದು ಇಲ್ಲೊಂದು ಅಂಗಡಿಯಲ್ಲಿ ಮಾತ್ರ ಇವೆ. ಹಣ್ಣಿನ ಗುಣಮಟ್ಟ, ಗಾತ್ರ ಹಾಗೂ ತಳಿಯ ಮೇಲೆ ಬೆಲೆ ವ್ಯತ್ಯಾಸವಾಗುತ್ತದೆ.

ಬೆಲೆ ಕೇಳಿದರೆ ಗ್ರಾಹಕರ ಮುಖ ಬಾಡುತ್ತದೆ. ಬೆಲೆ ಕೈಸುಡುವಂತಿದೆ. ಹಾಗಂತ ವರ್ಷದ ಅತಿಥಿಯನ್ನು ಬಿಡುವುದುಂಟೆ. ಬೆಲೆ ದುಬಾರಿಯಾದರೂ ಮಾವು ಪ್ರಿಯರು ಹಣ್ಣು ಖರೀದಿಸಿ ಸವಿದು ಆಸೆ ನೀಗಿಸಿಕೊಳ್ಳುತ್ತಿದ್ದಾರೆ.

ಆರೋಗ್ಯಕರ ಹಣ್ಣು: ಮಾವಿನ ಹಣ್ಣಿನ ಸ್ವಾದವೇ ಅಂಥದ್ದು. ದೊಡ್ಡವರಿರಲಿ, ಚಿಕ್ಕವರಿರಲಿ, ಹಣ್ಣಿನ ಹೋಳು ಬಾಯಿಗೆ ಬಿದ್ದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳಿಕೊಳ್ಳುತ್ತವೆ. ಆನಂದಮಯ ರಸಾನುಭೂತಿಗೆ ವಯಸ್ಸು ಅಡ್ಡಿಯಾಗದು. ಮಾವಿನ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.

ಈ ಹಣ್ಣಿನ ಸೇವನೆಯು ಜೀರ್ಣ ಕ್ರಿಯೆಗೆ ಪೂರಕ. ಅಜೀರ್ಣ ಸಮಸ್ಯೆಯಿಂದ ಬಳಲುವವರು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಈ ಹಣ್ಣಿನಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿಯಾಗಿದೆ.

ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಅಂಶವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕ್ಯಾನ್ಸರ್ ಕಾಯಿಲೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಲು ಈ ಹಣ್ಣು ಸಹಕಾರಿ ಎಂದು ವೈದ್ಯರು ಹೇಳುತ್ತಾರೆ.

ರಾಸಾಯನಿಕ ಬಳಕೆ: ಗ್ರಾಹಕರು ಮಾವು ಹಣ್ಣು ಖರೀದಿ ವೇಳೆ ಆಕರ್ಷಣೆಗೆ ಮಾರು ಹೋಗಿ ಎಚ್ಚರ ತಪ್ಪಿದರೆ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರುವುದು ನಿಶ್ಚಿತ. ಕೆಲ ವ್ಯಾಪಾರಿಗಳು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ವಿಷಕಾರಿ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಿದ್ದಾರೆ.

ಈ ಹಣ್ಣುಗಳು ನೋಡಲು ಆಕರ್ಷಕ ವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತವೆ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಇವು ಹೆಚ್ಚು ರುಚಿಕರವಲ್ಲ. ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ. ಜತೆಗೆ ಈ ಹಣ್ಣುಗಳು ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಬಾಳಿಕೆಯ ಅವಧಿ ತುಂಬಾ ಕಡಿಮೆ. ಈ ಹಣ್ಣುಗಳನ್ನು ಸೇವಿಸಿದರೆ ಕಾಯಿಲೆ ಬೀಳುವುದು ನಿಶ್ಚಿತ.

ಹೊರಗಿನಿಂದ ಆಮದು

ರಾಜ್ಯದೆಲ್ಲೆಡೆ ಈ ಬಾರಿ ಮಾವಿನ ಫಸಲು ಕಡಿಮೆ ಇದೆ. ಹೀಗಾಗಿ ಬೆಲೆ ಗಗನಕ್ಕೇರಿದೆ. ಆದರೂ ಬೇಡಿಕೆ ತಗ್ಗಿಲ್ಲ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಮಾವಿನ ಹಣ್ಣು ಆಮದಾಗುತ್ತಿದೆ. ಸ್ಥಳೀಯವಾಗಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾವು ಕೊಯ್ಲು ಆರಂಭವಾದರೆ ಬೆಲೆ ಕೊಂಚ ಕಡಿಮೆಯಾಗುತ್ತದೆ.
– ಪ್ರಕಾಶ್‌, ಮಾವು ಹಣ್ಣಿನ ವ್ಯಾಪಾರಿ

**
ವ್ಯಾಪಾರಿಗಳು ಹಣ ಸಂಪಾದನೆಗಾಗಿ ವಿಷಕಾರಿ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣು ಮಾಗಿಸುವುದನ್ನು ನಿಲ್ಲಿಸಬೇಕು. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕವಾಗಿ ಮಾಗಿದ ಹಣ್ಣುಗಳನ್ನು ಮಾರಾಟ ಮಾಡಬೇಕು
– ಬೈಲಪ್ಪ, ಗ್ರಾಹಕ
**
ಮೇ ನಿಂದ ಜುಲೈವರೆ ಮಾವಿನ ಸುಗ್ಗಿ. ಮಾರಾಟಕ್ಕೆ ತಂದ ಹಣ್ಣುಗಳು ಮೂರ್ನಾಲ್ಕು ದಿನದೊಳಗೆ ಗ್ರಾಹಕರ ಕೈಸೇರಿದರೆ ಅವರಿಗೂ ತೃಪ್ತಿ, ನಮಗೂ ಸಮಾಧಾನ
ನಿಸಾರ್‌ ಅಹಮ್ಮದ್‌, ಮಾವು ಹಣ್ಣಿನ ವ್ಯಾಪಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT