ಬೆಂಗಳೂರು: ಜೆಡಿಎಸ್ ಪ್ರಬಲವಾಗಿರುವ ಹಾಸನ, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೇರು ಬಿಡಲು ಬಿಜೆಪಿ ತೀರ್ಮಾನಿಸಿದೆ.
ದೇವೇಗೌಡರ ಪ್ರಾಬಲ್ಯವಿರುವ ಹಾಸನದಲ್ಲಿ ಪ್ರೀತಂಗೌಡ ಗೆದ್ದು ಬಂದಿದ್ದಾರೆ. ಸಕಲೇಶಪುರದ ಅಭ್ಯರ್ಥಿ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದಾರೆ. ಹೀಗಾಗಿ, ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಲ್ಲೂ ದಾರಿ ಮಾಡಿಕೊಂಡು ನುಸುಳಲು ಸದವಕಾಶ ಒದಗಿ ಬಂದಿದೆ.
ಕಾಂಗ್ರೆಸ್ ಹೈಕಮಾಂಡ್ನ ಅವಕಾಶವಾದಿ ನಿರ್ಧಾರದಿಂದ ಬೇಸತ್ತಿರುವ ಆ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಯತ್ತ ಸೆಳೆಯಲು ಬಿಜೆಪಿ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ.
ಅಸ್ಸಾಂ, ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ತೆಕ್ಕೆಯೊಳಗೆ ತಂದ ಮಾದರಿಯಲ್ಲೇ ರಾಜ್ಯದಲ್ಲೂ ಅಂತಹ ಪ್ರಯೋಗ ನಡೆಸಲು ಮುಂದಾಗಿದೆ ಎಂದೂ ಮೂಲಗಳು ಹೇಳಿವೆ.
ಟೀಂ ವರ್ಕ್ ಕೊರತೆ: ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗೆದ್ದು, ಮ್ಯಾಜಿಕ್ ಸಂಖ್ಯೆ ತಲುಪದಿರಲು ‘ಟೀಮ್ ವರ್ಕ್’ ಕೊರತೆಯೇ ಕಾರಣವೆಂದು ಬಿಜೆಪಿ ಪ್ರಮುಖ ನಾಯಕರು ಅಭಿಪ್ರಾಯಪಟ್ಟಿದ್ದಾರೆ.