ಸೂಲಿಬೆಲೆ: ಗ್ರಾಮದ ಸರ್ವೆ ನಂಬರ್ 381ರಲ್ಲಿ 16 ಗುಂಟೆ ಸರ್ಕಾರಿ ಕುಂಟೆ ಒತ್ತುವರಿಯಾಗಿದೆ. ಒತ್ತುವರಿ ತೆರವಿಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಐದಾರು ವರ್ಷಗಳ ಹಿಂದಿನವರೆಗೂ ಈ ಕುಂಟೆ ಅಸ್ತಿತ್ವದಲ್ಲಿ ಇದ್ದು, ನಂತರ ಅದನ್ನು ಹಂತ-ಹಂತವಾಗಿ ಮಣ್ಣನ್ನು ತುಂಬಿ ಮುಚ್ಚಲಾಗಿದೆ. ಕುಂಟೆ ಇದ್ದ ಸ್ಥಳದ ಅಕ್ಕಪಕ್ಕದಲ್ಲಿ ಖಾಸಗಿ ವಾಸದ ಮನೆಗಳು, ಶಾಲೆಯ ಕಟ್ಟಡ ಹಾಗೂ ಸಾರ್ವಜನಿಕರು ಬಳಸುತ್ತಿರುವ ಕಚ್ಛಾರಸ್ತೆ ಇದೆ.
ಹೊಸಕೋಟೆ ತಹಶೀಲ್ದಾರ್ ನಾರಾಯಣ್ ವಿಠಲ್ ಅವರನ್ನು ಈ ಕುರಿತು ಪ್ರಶ್ನಿಸಿದಾಗ, ‘ಈ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ವರದಿ ಕೊಡುವಂತೆ ಸೂಲಿಬೆಲೆ ಉಪ ತಹಶೀಲ್ದಾರರಿಗೆ ಸೂಚಿಸುತ್ತೇನೆ’ ಎಂದರು.
ಸೂಲಿಬೆಲೆ ಉಪ ತಹಶೀಲ್ದಾರ್ ಝಬೀವುಲ್ಲಾ ಮತ್ತು ಗ್ರಾಮ ಲೆಕ್ಕಾಧಿಕಾರಿ ಜ್ಞಾನಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ತಹಶೀಲ್ದಾರರಿಗೆ ವರದಿ ಸಲ್ಲಿಸುತ್ತೇವೆ ಹಾಗೂ ಸರ್ವೆ ಇಲಾಖೆಯಿಂದ ಅಳತೆ ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸುತ್ತೇವೆ’ ಎಂದರು.
ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಒತ್ತುವರಿಯಾಗಿದೆ’ ಎಂದು ವಕೀಲ ನರಸಿಂಹಮೂರ್ತಿ ದೂರಿದರು.