ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಬಾರದು ಎಂದು ಸೂಚನೆ ನೀಡಿ ಕೇವಲ ಮನವಿ ಮಾಡುವುದಕ್ಕಷ್ಟೇ ಅವಕಾಶ ನೀಡಿದರು. ಕೆಲ ಮುಖಂಡರು ಕೈಮುಗಿದು ಮನವಿ ಮಾಡುತ್ತಾ ದೊಡ್ಡ ಅಂಗಡಿ ಬೀದಿಯಲ್ಲಿ ಸಾಗಿದರು. ಕೆಲವು ಅಂಗಡಿ ಮಾಲೀಕರು ಕಾರ್ಯಕರ್ತರ ಮನವಿಗೆ ಓಗೊಟ್ಟು ಬಾಗಿಲು ಮುಚ್ಚಿದರು. ಮತ್ತೆ ಕೆಲವರು ಬಾಗಿಲು ಹಾಕಲು ಪ್ರತಿರೋಧ ವ್ಯಕ್ತಪಡಿಸಿದರು. ಕೆಲ ಕಾರ್ಯಕರ್ತರು ಅಂಗಡಿಗಳ ಮಾಲೀಕರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಇನ್ಸ್ಪೆಕ್ಟರ್ ಪೂವಯ್ಯ ಅವರು ಕಾರ್ಯಕರ್ತರನ್ನು ಮಾರುಕಟ್ಟೆ ಬಳಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.