ಬೆಳಗಾವಿ: ಇಲ್ಲಿನ ಸಂಭಾಜಿಗಲ್ಲಿಯ ಕಪಿಲೇಶ್ವರ ದೇವಸ್ಥಾನದ ಅರ್ಚಕ ರಾಮ ಪೂಜಾರಿ ಎನ್ನುವವರ ಮೇಲೆ ಯುವಕರ ಗುಂಪೊಂದು ಸೋಮವಾರ ತಡರಾತ್ರಿ ಹಲ್ಲೆ ನಡೆಸಿ, ಅವರನ್ನು ಅರೆಬೆತ್ತಲೆ ಮೆರವಣಿಗೆ ಮಾಡಿದೆ. ಗಾಯಗೊಂಡಿರುವ ಪೂಜಾರಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಪಿಲೇಶ್ವರ ಮಂದಿರದಲ್ಲಿ ಪೂಜಾ ಕಾರ್ಯಕ್ರಮ ಮುಗಿದ ನಂತರ ಯುವಕರ ತಂಡ ಆವರಣ ಸ್ವಚ್ಛಗೊಳಿಸಲು ಹೋದಾಗ ಅದಕ್ಕೆ ಅರ್ಚಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅರ್ಚಕ ಹಾಗೂ ಯುವಕರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಗಲಾಟೆ ನಂತರ ಯುವಕರು ದೇವಸ್ಥಾನದ ಹೊರಗೆ ನಿಂತಿದ್ದಾಗ ಪೂಜಾರಿಯ ಸಹೋದರಿ ಅವರ ಮೇಲೆ ಆ್ಯಸಿಡ್ ಚೆಲ್ಲಿದ್ದಾರೆ. ಇದರಿಂದ ಪ್ರಥಮೇಶ್ ಎಂಬುವವರಿಗೆ ಸುಟ್ಟು ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಾಗಿದೆ.