ಹಾನಗಲ್: ತಾಲ್ಲೂಕಿನ ಅಜಗುಂಡಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವ ನಡೆಯಿತು.
ಶಾಲೆಯ ಪ್ರತಿ ಕೊಠಡಿ ಮತ್ತು ಕಿಟಕಿಗಳಿಗೆ ತಳಿರು, ತೋರಣಗಳನ್ನು ಕಟ್ಟಿ, ಬಣ್ಣದ ಹಾಳೆಗಳಿಂದ ಸಿಂಗಾರ ಮಾಡಲಾಗಿತ್ತು. ವಿದ್ಯಾರ್ಥಿಗಳು ಚಕ್ಕಂಡಿ ಬಂಡಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಕಡ್ಡಾಯ ಶಿಕ್ಷಣ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ಸಂಪನ್ಮೂಲ ವ್ಯಕ್ತಿ ನಿರಂಜನ ಬಿ.ಎಂ.,‘5 ವರ್ಷ ಮೇಲಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರಬೇಕು. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು’ ಎಂದರು.
ಗ್ರಾಮದ ಬಸವರಾಜ ತಲ್ಲೂರ, ರವಿ ಹೊಸವಡ್ಡರ, ಮನೋಜ ಮಲ್ಲಾ, ನಿಶ್ಚಿತ ನಾಯಕ, ಸಚಿನ ಡಿಸೋಜ, ಪ್ರತಿಕ್ಷಾ ಚೌಟಿ, ರಾಧಾ ಹುಳ್ಳಿ ಇದ್ದರು. ಮುಖ್ಯ ಶಿಕ್ಷಕ ಸುಭಾಸ ಹೊಸಮನಿ, ಶಿಕ್ಷಕರಾದ ಎಸ್.ಎನ್.ಗಡಿಯಣ್ಣನವರ, ವನಜಾಕ್ಷಿ ನೇತೃತ್ವ ವಹಿಸಿದ್ದರು.
ಗಮನ ಸೆಳೆದ ‘ಅಕ್ಷರ ಬಂಡಿ’
ಅಕ್ಕಿಆಲೂರ: ಇಲ್ಲಿಗೆ ಸಮೀಪದ ಡೊಳ್ಳೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ವಿಭಿನ್ನವಾಗಿತ್ತು.
ಎತ್ತಿನ ಬಂಡಿಯನ್ನು ಅಕ್ಷರ ಬಂಡಿಯನ್ನಾಗಿ ರೂಪಿಸಲಾಗಿತ್ತು. ಬಲೂನ್, ತಳಿರು–ತೋರಣಗಳಿಂದ ಬಂಡಿಯನ್ನು ಸಿಂಗರಿಸಲಾಗಿತ್ತು. ಅದರೊಂದಿಗೆ ಎತ್ತುಗಳಿಗೂ ಜೂಲ, ಕೊರಳು ಮತ್ತು ಕಾಲಿಗೆ ಗೆಜ್ಜೆ ಕಟ್ಟಿ ಸಿಂಗರಿಸಲಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಕ್ಷರ ಬಂಡಿ ಶಿಕ್ಷಣದ ಮಹತ್ವದ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಿತು.
ಈ ವೇಳೆ ಎಲ್ಲ ಮನೆಗಳಿಗೆ ಭೇಟಿ ನೀಡಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು.ದಾರಿಯುದ್ದಕ್ಕೂ ಶಿಕ್ಷಣಕ್ಕೆ ಸಂಬಂಧಿಸಿದ ಘೋಷಣೆ ಕೂಗಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ ಯಳ್ಳೂರ, ಸಂಪನ್ಮೂಲ ವ್ಯಕ್ತಿ ಪ್ರಶಾಂತ ಕುಲಕರ್ಣಿ, ಮುಖ್ಯಶಿಕ್ಷಕ ಅಶೋಕ ಹನುಮಾಪೂರ ಇದ್ದರು.
‘ಮಕ್ಕಳ ವಿಕಾಸಕ್ಕಾಗಿ ಶಿಕ್ಷಣ ಕೊಡಿಸಿ’
ಶಿಗ್ಗಾವಿ: ‘ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಶಿಕ್ಷಣ ಕೊಡಿಸುವುದು ಅಗತ್ಯ’ ಎಂದು ಪುರಸಭೆ ಮಾಜಿ ಸದಸ್ಯ ಸೋಮಶೇಖರಯ್ಯ ಗೌರಿಮಠ ಹೇಳಿದರು.
ತಾಲ್ಲೂಕಿನ ಬಂಕಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಂಗಳವಾರ ನಡೆದ ಶಾಲಾ ಪ್ರಾರಂಭೋತ್ಸವ ನಿಮಿತ್ತ ನಡೆದ ಅಕ್ಷರ ಬಂಡಿ ಎಂಬ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಸ್ಡಿಎಸ್ಸಿ ಅಧ್ಯಕ್ಷ ಮಂಜು ತಳವಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರೂಪಾ ಬಳ್ಳಾರಿ, ಸದಸ್ಯರಾದ ರೇಖಾ ದೇಸಳ್ಳಿ, ಜಗದೀಶ ಚಿಲ್ಲೂರ, ಶ್ರೀದೇವಿ ಬೆಳಗಲಿ, ಮುಖಂಡರಾದ ಮಂಜು ಈರಪ್ಪನವರ, ಗದಿಗೆಪ್ಪ ತಳಳ್ಳಿ, ಶಂಕರ, ಮಾಲತೇಶ ತಳಳ್ಳಿ, ಮುಖ್ಯಶಿಕ್ಷಕ ಪಿ.ಎಂ.ಹದ್ದಣ್ಣವರ, ಎಂ.ಬಿ.ರಾಮಗೇರಿ, ಎನ್.ಬಿ.ಬೆಳಗಲಿ, ಎಸ್.ಎನ್.ಬಡಿಗೇರ, ಸುನಂದ ಹುರಕಡ್ಲಿ,ಗೌರಮ್ಮ ಒ.ಎಸ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.