ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಯುವಿಸಿಇ) ಪದವಿ ಪ್ರದಾನ ದಿನಾಚರಣೆ ನಡೆಯಿತು. ಬಿ.ಇ, ಎಂ.ಇ ಪೂರೈಸಿದ 989 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಟಿಎಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ನಿರ್ದೇಶಕ ಶ್ರೀಕಾಂತ್ ಶ್ರೀನಿವಾಸನ್, ‘ಪದವಿ ನಂತರ ಉದ್ಯೋಗಕ್ಕೆಂದು ವಿವಿಧ ಉದ್ಯಮಗಳನ್ನು ಸೇರಿಸುತ್ತೀರಿ. ಆದರೆ ಅದು ಯಾರಿಗೂ ಕಂಫರ್ಟ್ ಜೋನ್ ಅಲ್ಲ. ಬದಲಿಗೆ ಅದು ಸ್ಪರ್ಧಾ ತಾಣ. ಇಲ್ಲಿ ಉಳಿಯಬೇಕು ಮತ್ತು ಅಸ್ತಿತ್ವದಲ್ಲಿ ಇರಬೇಕು ಎಂದರೆ ಸ್ವಂತವಾಗಿ ಮತ್ತು ವೇಗವಾಗಿ ಕಲಿಯುವುದನ್ನು ರೂಢಿಸಿಕೊಳ್ಳಬೇಕು. ವ್ಯವಹಾರದ ಈ ಜಗದಲ್ಲಿ ಸ್ಪರ್ಧೆ ಎದುರಿಸುವುದನ್ನು ಕಲಿತರೆ ಮಾತ್ರ ಉಳಿಗಾಲ’ ಎಂದು ಕಿವಿಮಾತು ಹೇಳಿದರು.
ಬೆಂಗಳೂರು ವಿ.ವಿ ಹಂಗಾಮಿ ಕುಲಪತಿ ಡಾ. ಐ.ಎಸ್.ಶಿವಕುಮಾರ್, ’ವಿದ್ಯಾರ್ಥಿ ಜೀವನದ ಮಹತ್ವದ ಕ್ಷಣವಿದು. ಯುವಿಸಿಇಯಲ್ಲಿ ಕಲಿತ ಮತ್ತು ಪದವಿ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯ ಇರುತ್ತದೆ ಎಂಬುದನ್ನು ಹಲವು ವಿದ್ಯಾರ್ಥಿಗಳು ಸಾಧಿಸಿ ತೋರಿದ್ದಾರೆ. ಪದವಿ ನಂತರವೂ ಓದನ್ನು ಮುಂದುವರೆಸಿ. ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೂ ಕೊಡುಗೆ ನೀಡಿ’ ಎಂದರು.
ಯುವಿಸಿಇ ಪ್ರಾಚಾರ್ಯ ಡಾ. ಪಿ.ವಿಜಯ ಕುಮಾರ್, ಹಿಂದಿನ ಪ್ರಾಂಶುಪಾಲ ಡಾ. ಕೆ.ಆರ್.ವೇಣುಗೋಪಾಲ್, ಪ್ಲೇಸ್ಮೆಂಟ್ ಅಧಿಕಾರಿ ಡಾ. ಜಿ. ತ್ರಿವೇಣಿ, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.