ನವದೆಹಲಿ: ಎರಡು ದಿನಗಳ ಬ್ಯಾಂಕ್ ಸಿಬ್ಬಂದಿ ಮುಷ್ಕರದ ಕಾರಣಕ್ಕೆ ₹ 20 ಸಾವಿರ ಕೋಟಿಗಳಷ್ಟು ವಹಿವಾಟಿಗೆ ಧಕ್ಕೆ ಒದಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜಿಸಿದೆ.
ಬ್ಯಾಂಕ್ ಸಿಬ್ಬಂದಿ ಗುರುವಾರವೂ ಮುಷ್ಕರ ನಡೆಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿರುವ ‘ಅಸೋಚಾಂ’, ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಎದುರಿಸುತ್ತಿರುವ ಸದ್ಯದ ಅಭದ್ರ ಪರಿಸ್ಥಿತಿಯಲ್ಲಿ, ಹಣಕಾಸು ಪರಿಸ್ಥಿತಿ ಸುಧಾರಿಸಲು ಉತ್ತೇಜನಾ ಯೋಜನೆ ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.
‘ವಸೂಲಾಗದ ಸಾಲದ (ಎನ್ಪಿಎ) ಸಮಸ್ಯೆಗೆ ಸಿಲುಕಿರುವ ಬ್ಯಾಂಕ್ಗಳ ಒಟ್ಟಾರೆ ನಷ್ಟವು ಈ ವರ್ಷದ ಮಾರ್ಚ್ಗೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ₹ 50 ಸಾವಿರ ಕೋಟಿಗಳಿಗೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿನ (2017ರ ಡಿಸೆಂಬರ್) ₹ 19 ಸಾವಿರ ಕೋಟಿಗಳ ನಷ್ಟಕ್ಕೆ ಹೋಲಿಸಿದರೆ ಇದು ಎರಡು ಪಟ್ಟುಗಿಂತ ಹೆಚ್ಚಾಗಿದೆ’ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾವತ್ ಹೇಳಿದ್ದಾರೆ.
ಎಫ್ಕೆಸಿಸಿಐ ಟೀಕೆ: ಉದ್ದಿಮೆಗಳು ತಮ್ಮ ನೌಕರರ ತಿಂಗಳ ವೇತನ ಅಂತಿಮಗೊಳಿಸುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಮುಷ್ಕರವು ವಹಿವಾಟಿನ ಮೇಲಷ್ಟೇ ಅಲ್ಲದೆ ಜನಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ದೇಶದಾದ್ಯಂತ ನಡೆಯುತ್ತಿರುವ ಮುಷ್ಕರದಿಂದ ವ್ಯಾಪಾರ ವಹಿವಾಟಿಗೆ ತೀವ್ರ ಅಡಚಣೆಯಾಗಲಿದೆ ಎಂದು (ಎಫ್ಕೆಸಿಸಿಐ) ಅಭಿಪ್ರಾಯಪಟ್ಟಿದೆ.