ನವದೆಹಲಿ: ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಕ್ಲಾಟ್) ಫಲಿತಾಂಶವನ್ನು ಗುರುವಾರ ಪ್ರಕಟಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ದೂರುದಾರರ ಅಹವಾಲುಗಳನ್ನು ಆಲಿಸಿ ಜೂನ್ 6ರಂದು ವರದಿ ಸಲ್ಲಿಸುವಂತೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಕುಂದುಕೊರತೆ ಪರಿಹಾರ ಸಮಿತಿಗೆ ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಮೋಹನ್ ಎಂ. ಶಾಂತನಗೌಡರ ಅವರನ್ನು ಒಳಗೊಂಡ ರಜಾಕಾಲದ ಪೀಠ ಸೂಚಿಸಿದೆ.
ಮೇ 13ರಂದು ನಡೆದ ಕ್ಲಾಟ್ ಪರೀಕ್ಷೆ ಸಂದರ್ಭದಲ್ಲಿ ವಿವಿಧ ತಾಂತ್ರಿಕ ತೊಡಕುಗಳು ಉಂಟಾಗಿದ್ದವು ಎಂದು ಅಭ್ಯರ್ಥಿಗಳು ಆರೋಪಿಸಿದ್ದರು.
ಈ ವರ್ಷದ ಕ್ಲಾಟ್ ಪರೀಕ್ಷೆ ರದ್ದುಗೊಳಿಸಿ ಪುನಃ ಪರೀಕ್ಷೆ ನಡೆಸಬೇಕು ಎಂಬ ಮನವಿಯನ್ನು ಪೀಠ ನಿರಾಕರಿಸಿತು. ದೇಶದ 19 ಕಾನೂನು ಕಾಲೇಜುಗಳ ಪ್ರವೇಶಕ್ಕಾಗಿ ಸುಮಾರು 54,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.