ಬೆಂಗಳೂರು: ನಗರದ ವಿಕ್ರಮ್ ಆಸ್ಪತ್ರೆಯಲ್ಲಿ ‘ವಿಶ್ವ ಸ್ಕ್ಲೆರೋಸಿಸ್’ ದಿನದ ಅಂಗವಾಗಿ, ಬಹುಅಂಗ ವೈಕಲ್ಯದಿಂದ ತೊಂದರೆಗೆ ಒಳಗಾದವರಿಗೆ ಉಚಿತವಾಗಿ ಗಾಲಿ ಕುರ್ಚಿ ನೀಡುವ ಮೂಲಕ ಜಾಗೃತಿ ಮೂಡಿಸುವ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಡಾ. ರಾಜೇಶ್ ಬಿ. ಅಯ್ಯರ್ ಮಾತನಾಡಿ, ‘ಮಲ್ಟಿಪಲ್ ಸ್ಕ್ಲೆರೋಸಿಸ್’ ರೋಗವನ್ನು ನಾವು ಎಂ.ಎಸ್ (ಬಹುಅಂಗ ವೈಕಲ್ಯ) ಎಂದು ಕರೆಯುತ್ತೇವೆ. ಇದು ಅತ್ಯಂತ ವಿರಳ ಕಾಯಿಲೆ. ಆರಂಭದಲ್ಲೇ ಎಚ್ಚೆತ್ತುಕೊಂಡರೆ ಉಲ್ಬಣಿಸದಂತೆ ಜಾಗ್ರತೆ ವಹಿಸಬಹುದು’ ಎಂದರು.
‘ಇದು ಮನುಷ್ಯನ ನರಮಂಡಲ ಹಾಗೂ ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರಂಭದಲ್ಲಿ ಕಣ್ಣು ಮಂಜಾಗುವುದು, ಮರೆಗುಳಿತನ, ಕಣ್ಣು ನೋವು, ಎಡವಿ ಬೀಳುವಂತಹ ಲಕ್ಷಣಗಳು ಕಂಡುಬರುತ್ತವೆ. ಅನೇಕರಿಗೆ ಈ ಕುರಿತು ಮಾಹಿತಿ ಇಲ್ಲ. ಆದ್ದರಿಂದ ಜಾಗೃತಿ ಮೂಡಿಸಬೇಕಿದೆ’ ಎಂದರು.
‘ಎಂಆರ್ಐ ಸ್ಕ್ಯಾನ್ ಹಾಗೂ ರಕ್ತಪರೀಕ್ಷೆಯಿಂದ ಈ ಕಾಯಿಲೆಯನ್ನು ಪತ್ತೆ ಹಚ್ಚಬಹುದು’ ಎಂದು ಹೇಳಿದರು.