ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ವ್ಯಕ್ತಿಗತವಾದ ದಾಳಿ ಮಾಡಿ ತೇಜೋವಧೆ ಮಾಡುವುದು ನಿಲ್ಲಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಬಿಜೆಪಿಯವರು ಶಿವಕುಮಾರ್ ಅವರನ್ನು ತಮ್ಮತ್ತ ಸೆಳೆಯಲು ಯತ್ನಿಸಿದ್ದರು. ಅವರು ಮಣಿಯದಿದ್ದಾಗ ಈ ರೀತಿ ದಾಳಿ ಮಾಡುತ್ತಿದ್ದಾರೆ. ಹಾಗೆ ಆಮಿಷವೊಡ್ಡಿದವರ ಮೇಲೂ ದಾಳಿ ನಡೆಸಬಹುದಿತ್ತಲ್ಲವೇ? ವಿನಾಕಾರಣ ತೇಜೋವಧೆ ಮಾಡುವುದು ಏಕೆ? ಇದು ಮುಂದುವರಿದರೆ ಕೇಂದ್ರ ಸರ್ಕಾರದ ಹಾಗೂ ಬಿಜೆಪಿ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು. ದೆಹಲಿಗೆ ನಿಯೋಗ ತೆರಳಿ ಪ್ರತಿಭಟನೆ ನಡೆಸಲಿದೆ. ಪ್ರಧಾನಿಯವರಿಗೂ ಈ ವಿಷಯ ಮನವರಿಕೆ ಮಾಡಲಾಗುವುದು ಎಂದರು.
ಈ ಪ್ರಕರಣ ನೋಡಿದರೆ ನಾಳೆ ನಮ್ಮ ಮೇಲೂ ಇದೇ ಸಂಸ್ಥೆಗಳನ್ನು ಬಳಸಿಕೊಂಡು ತೇಜೋವಧೆ ಮಾಡಬಹುದಲ್ಲವೇ ಎಂದು ಬಿಜೆಪಿ ನಾಯಕರೇ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ನಿಷ್ಠಾವಂತ ನಾಯಕನ ಬೆಳವಣಿಗೆಯನ್ನು ಕಟ್ಟಿಹಾಕುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಡಿಕೆಶಿ ಅವರಿಗೆ ಮಂತ್ರಿ ಪದವಿ ಕೊಡುವುದು ಅಥವಾ ಬಿಡುವುದು ಆಯಾ ಪಕ್ಷಗಳ ಆಂತರಿಕ ವಿಚಾರ. ನಮ್ಮ ಹೋರಾಟ ವ್ಯಕ್ತಿಗತ ದಾಳಿಯ ವಿರುದ್ಧ ಎಂದು ಸ್ಪಷ್ಟಪಡಿಸಿದರು.
ಸಂಘದ ಪದಾಧಿಕಾರಿಗಳಾದ ಯಳವಳ್ಳಿ ರಮೇಶ್, ಡಿ.ಸಿ.ಕೆ. ಕಾಳೇಗೌಡ, ಪ್ರೊ.ಮಲ್ಲಯ್ಯ, ಕೆ.ಕೃಷ್ಣಮೂರ್ತಿ, ಬಿ.ಪಿ. ಮಂಜೇಗೌಡ ಇದ್ದರು.