ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ವಿಜಯಪುರದ ಎಕ್ಸಲೆಂಟ್ ಪಿಯು ವಿಜ್ಞಾನ ಕಾಲೇಜಿನ ಶ್ರೀಧರ್ ದೊಡ್ಡಮನಿ ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಖತ್ರಿ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶದ ವಿವರ ಹಾಗೂ ರ್ಯಾಂಕ್ ಪಡೆದವರ ಪಟ್ಟಿ ಬಿಡುಗಡೆ ಮಾಡಿದರು.
ಬಿ.ಎಸ್ಸಿ (ಕೃಷಿ) ವಿಭಾಗದಲ್ಲಿಯೂ ಶ್ರೀಧರ್ ಮೊದಲ ರ್ಯಾಂಕ್ ಗಳಿಸಿದ್ದಾರೆ. ಪಶು ವೈದ್ಯ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ವಿನೀತ್ ಮೇಗರ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ಪುತ್ರ ತುಹಿನ್ ಗಿರಿನಾಥ್ ಬಿ– ಫಾರ್ಮಾ ಮತ್ತು ಫಾರ್ಮಾ–ಡಿ ವಿಭಾಗದಲ್ಲಿ ಪ್ರಥಮ, ಎಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಕಳೆದ ಬಾರಿಯಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳಿಗಾಗಿ ನೀಟ್ ಪರೀಕ್ಷೆ ನಡೆಯುತ್ತಿರುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವುಗಳ ರ್ಯಾಂಕ್ ಪ್ರಕಟಿಸುತ್ತಿಲ್ಲ. ನೀಟ್ ಫಲಿತಾಂಶದ ಆಧಾರದ ಮೇಲೆ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಹೋಮಿಯೋಪತಿ ಕೋರ್ಸ್ಗಳಿಗೆ ಪ್ರವೇಶ ನೀಡಲಾಗುವುದು. ವೈದ್ಯಕೀಯ ಕೋರ್ಸ್ಗಳಿಗೆ ಇದೇ 25ರಿಂದ ಜುಲೈ 5ರ ಅವಧಿಯಲ್ಲಿ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ ಎಂದು ವಿ.ಮಂಜುಳಾ ಹೇಳಿದರು.
ಎಂಜಿನಿಯರಿಂಗ್ ಕೋರ್ಸ್ನಲ್ಲಿ 1.46 ಲಕ್ಷ, ಕೃಷಿ ಕೋರ್ಸ್ನಲ್ಲಿ 1.13 ಲಕ್ಷ, ಪಶು ವೈದ್ಯ ವಿಜ್ಞಾನ ಕೋರ್ಸ್ನಲ್ಲಿ 1.15 ಲಕ್ಷ ಮತ್ತು ಬಿ.ಫಾರ್ಮಾ/ಫಾರ್ಮಾ–ಡಿಯಲ್ಲಿ 1.47 ಲಕ್ಷ ರ್ಯಾಂಕ್ಗಳನ್ನು ನೀಡಲಾಗಿದೆ. ಎನ್ಎಟಿಎ ಹಾಗೂ ಜೆಇಇ ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸ್ಗಳ ಪ್ರವೇಶಕ್ಕೆ ರ್ಯಾಂಕ್ಗಳನ್ನು ಪ್ರಕಟಿಸಲಾಗುತ್ತದೆ.
ರ್ಯಾಂಕ್ ತಡೆಹಿಡಿಯಲಾದ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯನ್ನು ಪ್ರಾಧಿಕಾರದ ಇ–ಮೇಲ್ keauthority-ka@nic.in ನಲ್ಲಿ ಸಲ್ಲಿಸಿ ರ್ಯಾಂಕ್ಗಳನ್ನು ಪಡೆಯಬಹುದು.
ಜೂನ್ 5ಕ್ಕೆ ದಾಖಲಾತಿ ಪರಿಶೀಲನೆ ಕಾರ್ಯ ಆರಂಭವಾಗಲಿದೆ. ವಿದ್ಯಾರ್ಥಿ ಎಷ್ಟೇ ವಿಭಾಗಗಳಲ್ಲಿ ರ್ಯಾಂಕ್ ಪಡೆದಿದ್ದರೂ (ಉದಾಹರಣೆಗೆ: ಎಂಜಿನಿಯರಿಂಗ್, ಪಶು ವೈದ್ಯ ವಿಜ್ಞಾನ, ಬಿ–ಫಾರ್ಮಾ, ಫಾರ್ಮಾ–ಡಿ ಅಥವಾ ಬಿಎಸ್ಸಿ ಕೃಷಿ) ಹಾಗೂ ಯಾವುದೇ ಕೋರ್ಸ್ಗೆ ಪ್ರವೇಶ ಪಡೆದರೂ ಒಂದೇ ಬಾರಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ.
2018–19ನೇ ಸಾಲಿಗೆ ಲಭ್ಯ ಇರುವ ಎಂಜಿನಿಯರಿಂಗ್ ಕಾಲೇಜುಗಳ ಸೀಟುಗಳು ಮತ್ತು ಶುಲ್ಕ ಎಷ್ಟು ಎಂಬುದು ಇನ್ನೂ ಅಂತಿಮವಾಗಿಲ್ಲ. ಶುಲ್ಕ ಹೆಚ್ಚಳ ಸಂಬಂಧ ಸರ್ಕಾರ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಮಧ್ಯೆ ಚರ್ಚೆ ನಡೆಯಲಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾದ ನಂತರ ಶುಲ್ಕ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ರಾಜಕುಮಾರ್ ಖತ್ರಿ ತಿಳಿಸಿದರು.
ಸಿಇಟಿ–ಅಗ್ರ ಐವರು
ಎಂಜಿನಿಯರಿಂಗ್
ಶ್ರೀಧರ್ ದೊಡ್ಡಮನಿ; ವಿಜಯಪುರ
ನಾರಾಯಣ ಪೈ; ದಕ್ಷಿಣ ಕನ್ನಡ
ದೇಬರ್ಶೊ ಸನ್ಯಾಸಿ; ಬಳ್ಳಾರಿ
ತುಹಿನ್ ಗಿರಿನಾಥ್; ಬೆಂಗಳೂರು
ಅನೀತಾ ಜೇಮ್ಸ್; ಬೆಂಗಳೂರು
ಬಿ.ಎಸ್ಸಿ (ಕೃಷಿ)
ಶ್ರೀಧರ್ ದೊಡ್ಡಮನಿ; ವಿಜಯಪುರ
ಆರ್. ಸಾಯಿಕುಮಾರ್; ಧಾರವಾಡ
ಮಹಿಮಾಕೃಷ್ಣ; ಬೆಂಗಳೂರು
ಎಸ್.ಆರ್.ಅಪರೂಪ; ಬಳ್ಳಾರಿ
ಎಸ್.ಶ್ರೇಯಸ್; ತುಮಕೂರು
ಪಶು ವೈದ್ಯ ವಿಜ್ಞಾನ
ವಿನೀತ್ ಮೇಗರ್; ಮಂಗಳೂರು
ಎಸ್.ಆರ್.ಅಪರೂಪ; ಬಳ್ಳಾರಿ
ಆದಿತ್ಯ ಚಿದಾನಂದ; ಬೆಂಗಳೂರು
ಪಿ.ಜೆ.ವೈಷ್ಣವಿ; ಮಂಗಳೂರು
ಎಸ್.ಶ್ರೇಯಸ್; ತುಮಕೂರು
ಬಿ– ಫಾರ್ಮಾ ಮತ್ತು ಫಾರ್ಮಾ–ಡಿ
ತುಹಿನ್ ಗಿರಿನಾಥ್; ಬೆಂಗಳೂರು
ಅನೀತಾ ಜೇಮ್ಸ್; ಬೆಂಗಳೂರು
ಎಂ.ಯೋಗೇಶ್ ಮಾಧವ ರೆಡ್ಡಿ; ಬೆಂಗಳೂರು
ದೇಬರ್ಶೊ ಸನ್ಯಾಸಿ; ಬಳ್ಳಾರಿ
ನಾರಾಯಣ ಪೈ: ದಕ್ಷಿಣ ಕನ್ನಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.