ಬೆಂಗಳೂರು: ಹೈಕೋರ್ಟ್ನ ಸರ್ಕಾರಿ ವಕೀಲ ಎಚ್.ಟಿ ನರೇಂದ್ರ ಪ್ರಸಾದ್ ಹಾಗೂ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಮೊಹಮದ್ ನವಾಜ್ ಅವರು ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.
ಇವರ ನೇಮಕಕ್ಕೆ ಕೇಂದ್ರ ಕಾನೂನು ಸಚಿವಾಲಯದ ಜಂಟಿ ಕಾರ್ಯದರ್ಶಿ ಶುಕ್ರವಾರ ತಾತ್ವಿಕ ಅನುಮೋದನೆ ನೀಡಿದ್ದಾರೆ. ಇಬ್ಬರೂ ನ್ಯಾಯಮೂರ್ತಿಗಳು ಇದೇ 4ರಂದು ಅಧಿಕಾರ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆ ಇದೆ.
ಮೊಹಮದ್ ನವಾಜ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವಿ ನಂತರ ಬೆಂಗಳೂರಿನ ಎಸ್ಜೆಆರ್ಸಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮದಬೂರಿನ ಎಚ್.ಟಿ ನರೇಂದ್ರ ಪ್ರಸಾದ್, 1993ರಲ್ಲಿ ಮೈಸೂರಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.