ದಂಗೆ ಎಂಬ ಪದ ಪ್ರಯೋಗ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಸಹಜ’ ಎಂಬ ವ್ಯಾಖ್ಯೆ ಮಾಡಿರುವುದು ವಿಪರ್ಯಾಸವಲ್ಲವೇ? ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ‘ಸಂಪೂರ್ಣ ಕ್ರಾಂತಿ’ ಎಂಬ ಹೋರಾಟಕ್ಕೆ ಪ್ರೇರೇಪಿಸಿದ್ದರೂ ‘ದಂಗೆ’ ಎಂಬ ಪದಪ್ರಯೋಗ ಮಾಡಿರಲಿಲ್ಲ.
ಮುಖ್ಯಮಂತ್ರಿ ಸ್ಥಾನದಲ್ಲಿದ್ದು ‘ಅಪ್ರಜಾಪ್ರಭುತ್ವ, ಅಸಾಂವಿಧಾನಿಕ ಪದ ಪ್ರಯೋಗ ಎಷ್ಟು ಸಮಂಜಸ’ ಎನ್ನುವುದರ ಬಗ್ಗೆ ಈಗ ಜನಸಾಮಾನ್ಯರೂಚರ್ಚಿಸುತ್ತಿದ್ದಾರೆ. ರಾಜಕೀಯ ವೈಷಮ್ಯಕ್ಕೆ ದಂಗೆ ಪದವನ್ನು ತಳಕು ಹಾಕಿದ್ದು ಸರಿಯಲ್ಲ. ಸಮಾಜದಲ್ಲಿ ಸಂಘರ್ಷ, ಕಲಹ, ಕೋಲಾಹಲ ಸೃಷ್ಟಿಸಲು ಪ್ರಚೋದಿಸಿದಂತೆ ಭಾಸವಾಗುತ್ತದೆ.