‘₹ 2.5 ಲಕ್ಷ ಸಾಲ ಮಾಡಿ ಬೆಳೆಯನ್ನು ಇಟ್ಟಿದ್ದೆ. ತೋಟ ಮಾಡಲು 30 ಕೆ.ಜಿ ಗೊಬ್ಬರದ ಮೂಟೆಗಳು, ಕುರಿ, ಕೋಳಿ ಗೊಬ್ಬರ ಮತ್ತು ತಿಪ್ಪೆ ಗೊಬ್ಬರದ ನಾಲ್ಕು ಲಾರಿ ಲೊಡುಗಳಷ್ಟು ಗೊಬ್ಬರವನ್ನು ಭೂಮಿ ಹದ ಮಾಡುವಾಗ ಚೆಲ್ಲಿದ್ದೆ. ಬೆಳೆ ಚೆನ್ನಾಗಿ ಬಂದಿತ್ತು. ಕೇವಲ ಸ್ಯಾಂಪಲ್ ಎಂದು 250 ಬಾಕ್ಸ್ಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಿದ್ದರಿಂದ ₹ 150 ಬೆಲೆಯಲ್ಲಿ ಒಳ್ಳೆಯ ಹಣ ಬಂದಿತ್ತು. ಇನ್ನೂ 30,000 ಬಾಕ್ಸ್ ಟೊಮೆಟೊ ಕೊಯ್ದು ಮಾರಾಟ ಮಾಡಿದರೆ ಒಳ್ಳೆಯ ಹಣ ಬರಬಹುದು ಎಂದು ನಂಬಿದ್ದೆ. ಆದರೆ ಬೆಳೆ ನೆಲಕಚ್ಚಿರುವುದನ್ನು ಕಂಡು ದಿಕ್ಕು ತೋಚದಂತಾಗಿದೆ’ ಎಂದು ರೈತ ಎಂ.ಸಿ.ಶ್ರೀನಿವಾಸಪ್ಪ ತಲೆಮೇಲೆ ಕೈಹೊತ್ತು ಕುಳಿತರು.