ನವದೆಹಲಿ, ಜೂನ್ 2– ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿ ರಚನೆಗೆ ಕಾರ್ಯ ಸಮಿತಿ ಸಲಹೆ ಮಾಡಿದ ನಿಯಮವನ್ನು ಏ.ಐ.ಸಿ.ಸಿ.
ಇಂದು ರಾತ್ರಿ ಸರ್ವಾನುಮತದಿಂದ ಅಂಗೀಕರಿಸಿತು.
ಈ ನಿಯಮವನ್ನು ಅಂಗೀಕರಿಸುವ ಮೊದಲು ಚುರುಕಾದ ಚರ್ಚೆ ನಡೆಯಿತು.
ವೇತನ ಮಂಡಳಿ ಶಿಫಾರಸುಗಳಿಗೆ ಶಾಸನ ಸ್ವರೂಪ
ನವದೆಹಲಿ, ಜೂನ್ 2– ವೇತನ ಮಂಡಳಿ ಶಿಫಾರಸುಗಳಿಗೆ ಶಾಸನದ ಸ್ವರೂಪವಿರಬೇಕೆಂದು ರಾಷ್ಟ್ರೀಯ ಕಾರ್ಮಿಕ ಆಯೋಗ ನೇಮಿಸಿರುವ ವೇತನ ಮಂಡಳಿಗಳ ಬಗೆಗಿನ ಸಮಿತಿಯ ಸಲಹೆ.
ಹೆಲೆನ್ ಕೆಲರ್ ಅವರ ನಿಧನ
ವೆಸ್ಟ್ ಹೋರ್ಟ್, ಜೂನ್ 2– ಕುರುಡುತನ ಕಿವುಡುತನಗಳೆರಡನ್ನೂ ಮೆಟ್ಟಿ ಪ್ರಪಂಚದ ಮಹಾನ್ ಮಹಿಳೆಯಾದ ಹೆಲೆನ್ ಕೆಲರ್ ನಿನ್ನೆ ಇಲ್ಲಿ ತಮ್ಮ ಗೃಹದಲ್ಲಿ ನಿಧನರಾದರು.
ಜೂನ್ 27ಕ್ಕೆ ಅವರಿಗೆ 88ವರ್ಷ ವಯಸ್ಸಾಗುತ್ತಿತ್ತು.
ಆಗ್ನೇಯ ಏಷ್ಯಾ ದೇಶಗಳ ಜೊತೆ ನಿಕಟ ಬಾಂಧವ್ಯ ಅಗತ್ಯ: ಇಂದಿರಾ
ನವದೆಹಲಿ, ಜೂನ್ 2– ಆಗ್ನೇಯ ಏಷ್ಯಾದಲ್ಲಿ ಪರಿಸ್ಥಿತಿ ‘ತ್ವರಿತವಾಗಿ ಬದಲಾವಣೆ’ ಯಾಗುತ್ತಿದೆಯೆಂದೂ ಅದನ್ನು ಭಾರತ ಅಲಕ್ಷಿಸುವುದಕ್ಕೆ ಆಗುವುದಿಲ್ಲವೆಂದೂ ಪ್ರಧಾನಿ ಇಂದಿರಾ ಗಾಂಧಿ ಇಂದು ಇಲ್ಲಿ ಸಂಸತ್ ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಾಹಕ ಸಮಿತಿ ಸಭೆಗೆ ತಿಳಿಸಿದರು.
ತಮ್ಮ ಇತ್ತೀಚಿನ ವಿದೇಶ ಪ್ರವಾಸಾನುಭವವನ್ನು ತಿಳಿಸುತ್ತಿದ್ದ ಪ್ರಧಾನಿ ಅವರು, ಆ ದೇಶಗಳ ಜೊತೆ ವೈಯಕ್ತಿಕ ಬಾಂಧವ್ಯ ಇಟ್ಟುಕೊಳ್ಳುವುದು ಅತ್ಯಗತ್ಯ. ಅಲ್ಲದೆ ಆ ರಾಷ್ಟ್ರಗಳ ನಾಯಕರ ಭಾವನೆಗಳನ್ನು ವೈಯಕ್ತಿಕವಾಗಿ ಅರಿಯುವುದು ಅಗತ್ಯ ಎಂದರು.