ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಾಧಕ– ಬಾಧಕಗಳ ಚರ್ಚೆ ನಡೆಸಲು ಕಾನೂನು ಪರಿಣತರು ಮತ್ತು ಅಧಿಕಾರಿಗಳ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕಾವೇರಿ ನದಿ ಪ್ರಾಧಿಕಾರದ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.
ತಜ್ಞರ ಜತೆಗಿನ ಚರ್ಚೆಯ ಬಳಿಕ ಪ್ರಾಧಿಕಾರದ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ ಎಂದೂ ಕುಮಾರಸ್ವಾಮಿ ಹೇಳಿದರು.
ತಮಿಳುನಾಡು ಸ್ವಾಗತ (ಚೆನ್ನೈ ವರದಿ): ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಎಂಎ) ರಚನೆ ಮಾಡಿರುವ ಕೇಂದ್ರದ ಕ್ರಮವನ್ನು ತಮಿಳುನಾಡು ಸ್ವಾಗತಿಸಿದ್ದು, ಇದು ‘ಅಮ್ಮನ (ಜಯಲಲಿತಾ) ಸರ್ಕಾರ’ಕ್ಕೆ ಹಾಗೂ ರಾಜ್ಯದ ರೈತರಿಗೆ ಸಿಕ್ಕ ಗೆಲುವು ಎಂದು ಬಣ್ಣಿಸಿದೆ.