ಬೆಳಗಾವಿ: ಸಂಚಾರಕ್ಕೆ ನಿತ್ಯ ತೊಂದರೆಯಾಗಿರುವ ನಗರದ ಹಳೆ ಪಿಬಿ ರಸ್ತೆಯ ತರಕಾರಿ ಮಾರುಕಟ್ಟೆ ಬಳಿಯ ನಾಲೆಯನ್ನು ಸಂಸದ ಸುರೇಶ ಅಂಗಡಿ ಮತ್ತು ಶಾಸಕ ಅನಿಲ ಬೆನಕೆ ಶನಿವಾರ ಪರಿಶೀಲಿಸಿದರು.
ಮಳೆಗಾಲದ ಸಂದರ್ಭದಲ್ಲಿ ಉಕ್ಕಿ ಹರಿದು ತೀವ್ರ ತೊಂದರೆ ಮಾಡುವ ಈ ನಾಲೆಯ ಸ್ವಚ್ಛತೆ ಮೂಲಕ ನೀರು ಸರಾಗವಾಗಿ ಹರಿಯಲು ತುರ್ತು ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದರು.
ಇತ್ತೀಚೆಗೆ ನಿರ್ಮಿಸಿದ ನೂತನ ಓವರ್ ಬ್ರಿಡ್ಜ್ ಅಕ್ಕಪಕ್ಕದಲ್ಲಿ ಸರ್ವಿಸ್ ರಸ್ತೆ ಇಲ್ಲದೇ ತೊಂದರೆಯಾಗಿದ್ದು, ಅಂಗಡಿಕಾರರಿಗೆ ಮತ್ತು ರಹವಾಸಿಗಳ ಅನುಕೂಲಕ್ಕೆ ರಸ್ತೆ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಯಿತು. ಮಳೆಗಾಲದಲ್ಲಿ ವಸತಿ ಪ್ರದೇಶಗಳಿಗೆ ನೀರು ನುಗ್ಗುವುದನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಶಾಸಕ ಅಭಯ ಪಾಟೀಲ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಕಂಟೋನ್ಮೆಂಟ್ ಬೋರ್ಡ್ ಸಿಇಒ ದಿವ್ಯಾ ಶಿವರಾಮ್, ಮಹಾನಗರ ಪಾಲಿಕೆ ಆಯುಕ್ತ ಕೃಷ್ಟೇಗೌಡ ತಾಯನ್ನವರ, ಎಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಇದ್ದರು.