ಚನ್ನಪಟ್ಟಣ: ಅರಣ್ಯ ನಾಶದಿಂದ ಮಾನವ ಹಲವು ಸಮಸ್ಯೆ ಎದುರಿಸುತ್ತಿದ್ದು, ಮುಂದಾದರೂ ಎಚ್ಚೆತ್ತುಕೊಳ್ಳದಿದ್ದರೆ ವಿನಾಶ ಖಂಡಿತ ಎಂದು ಚನ್ನಾಂಬಿಕಾ ಪದವಿ ಕಾಲೇಜು ಪ್ರಾಂಶುಪಾಲ ವಿಜಯ್ ರಾಂಪುರ ಮನವಿ ಮಾಡಿದರು.
ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಪರಿಸರ ಜಾಗೃತಿ ಕುರಿತಾದ ಬೀದಿ ನಾಟಕ ಹಾಗೂ ಗೀತಗಾಯನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ನಾಶದಿಂದ ಪ್ರಾಣಿ ಸಂಕುಲ ನಾಶ, ಜಾಗತಿಕ ತಾಪಮಾನ ಹೆಚ್ಚಳ, ಪದೇ ಪದೇ ಎದುರಾಗುತ್ತಿರುವ ಬರಗಾಲ, ಜಲಮೂಲಗಳ ನಾಶದಿಂದಾಗಿ ಅಂತರ್ಜಲ ಮಟ್ಟ ಕುಸಿತ ಇತ್ಯಾದಿ ಸಮಸ್ಯೆಗಳಿಂದ ನಲುಗುತ್ತಿದ್ದೇವೆ ಎಂದು ಹೇಳಿದರು.
ಮಾನವ ಸಂಕುಲ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಅವ್ಯಾಹತವಾಗಿ ಸಾಗಿರುವ ಮರಳು ದಂಧೆ, ಅರಣ್ಯಗಳಿಗೆ ಬೆಂಕಿ ಹಚ್ಚುವುದು, ಗಿಡಮರಗಳ ನಾಶದಿಂದಾಗಿ ಶುದ್ಧ ಗಾಳಿ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಪರಿತಪಿಸುವಂತಾಗಿದೆ ಎಂದು ಅವರು ಹೇಳಿದರು.
‘ಈ ಭೂಮಂಡಲವನ್ನು ರಕ್ಷಿಸಬೇಕಾದುದ್ದು ನಮ್ಮ ಗುರುತರ ಜವಾಬ್ದಾರಿಯಾಗಿದೆ.ಪ್ರತಿಯೊಂದು ಜೀವನ ಸಂಕುಲಗಳ ಉಳಿವು, ಪರಿಸರ ಸಂರಕ್ಷಣೆಯಲ್ಲಿದೆ ಎಂಬ ಅರಿವು ಎಲ್ಲರಲ್ಲೂ ಮೂಡಬೇಕು’ ಎಂದು ಅವರು ಹೇಳಿದರು.
ಹಿರಿಯ ಜನಪದ ಗಾಯಕ ಚೌ.ಪು. ಸ್ವಾಮಿ ಮಾತನಾಡಿ, ಮಾನವನ ದುರಾಸೆಯಿಂದಾಗಿ ಪ್ರಕೃತಿಯಲ್ಲಿ ಏರುಪೇರುಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿಯೊಬ್ಬರು ತಮ್ಮ ಸುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳುಬೇಕು. ಜೊತೆಗೆ ಸುತ್ತಮುತ್ತ ಗಿಡಮರಗಳನ್ನು ಸಂರಕ್ಷಿಸಿ ಆರೋಗ್ಯದಾಯಕ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಗ್ರಾಮಸ್ಥರಾದ ಸಿ.ವಿ. ಕೌಶಿಕ್ ಗೌಡ, ಕೆ.ಪಿ. ವಿಶ್ವಾಸ್, ತಿಮ್ಮಯ್ಯ, ರವಿ, ಆನಂದ, ಶಶಿ, ಶಿವಕುಮಾರ್, ಸಚಿನ್, ಗಂಗಾಧರ, ಅಭಿ, ಲಕ್ಷ್ಮಮ್ಮ, ಗೌರಮ್ಮ, ರಾಮಚಂದ್ರಯ್ಯ ಹಾಜರಿದ್ದರು. ಕಾರ್ಯಕ್ರಮದಲ್ಲಿ ಪರಿಸರ ಕುರಿತ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.