ಶಿವಮೊಗ್ಗ:ಬಗರ್ಹುಕುಂ ಜಮೀನು ಅಕ್ರಮ ಮಂಜೂರಾತಿ ಮಾಡಿರುವ ಭದ್ರಾವತಿ ತಹಶೀಲ್ದಾರ್ ಹಾಗೂ ಗ್ರಾಮಾಂತರ ಪಿಎಸ್ಐ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶನಿವಾರ ಬಿ.ಎಚ್. ರಸ್ತೆಯ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ತಮಟೆ ಚಳವಳಿ ನಡೆಸಿದರು.
ಬಗರ್ಹುಕುಂ ಮಂಜೂರಾತಿ ನಿಯಮ ಗಾಳಿಗೆ ತೂರಿದ್ದಾರೆ. ಇವರ ವಿರುದ್ಧ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸುತ್ತಿದೆ. ಈ ಹಿಂದೆ ಕಾಲ್ನಡಿಗೆ ಜಾಥಾ ಕೂಡ ಮಾಡಿದೆ. ಜಿಲ್ಲಾಡಳಿತ ತನಿಖೆಗಾಗಿ ಆಂತರಿಕ ಸಮಿತಿ ನೇಮಿಸಿದೆ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅವ್ಯವಹಾರಗಳಲ್ಲಿ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಿಗ, ಸರ್ವೆ ಸಿಬ್ಬಂದಿ ಭಾಗಿಯಾಗಿದ್ದಾರೆಎಂದು ದೂರಿದರು.
ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಮುಖಂಡರಾದ ಟಿ.ಎಚ್. ಹಾಲೇಶಪ್ಪ, ಚಿಕ್ಕಮರಡಿ ರಮೇಶ್, ರತನ್ ಜ್ಯೋತಿ, ಜಗ್ಗು, ಸದಾನಂದ್, ಸುವರ್ಣ, ಏಳುಮಲೈ, ವಿನೋದ್, ಪಳನಿರಾಜ್, ಸದಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.