ಹೆಬ್ರಿ: ಮಲ್ಪೆ ಹೆಬ್ರಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಶಿವಪುರ ಸೇತುವೆ, ಸೀತಾನದಿ ಸೇತುವೆ ಮತ್ತು ಸೀತಾನದಿ ವೃತ್ತದ ಬಳಿ ಬಿದ್ದಿರುವ ಬೃಹತ್ ಗಾತ್ರದ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಶಿವಪುರ ಸೇತುವೆ ಮತ್ತು ಸೀತಾನದಿ ಸೇತುವೆ ಮೇಲಿನ ಒಂದು ಹಂತದ ಕಾಂಕ್ರೀಟ್ ಪದರು ಕಿತ್ತು ಹೋಗಿ ಅರ್ಧ ಅಡಿಗಿಂತಲೂ ದೊಡ್ಡ ಹೊಂಡ ಆಗಿವೆ. ಶಿವಮೊಗ್ಗ – ಉಡುಪಿ ದಿನವಿಡಿ ಸಾವಿರಾರು ಲಘು ಮತ್ತು ಘನ ವಾಹನಗಳು ಸಂಚರಿಸುತ್ತಿದ್ದ ಹೊಂಡಗಳು ಗಮನಕ್ಕೆ ಬಾರದೇ ಹೆಚ್ಚಿನ ಅಪಾಯ ಆಹ್ವಾನಿಸುವಂತಿದೆ. ರಾಷ್ಟ್ರೀಯ ಹೆದ್ದಾರಿ ಸೀತಾನದಿಯಲ್ಲಿ ರಸ್ತೆಯ ಮಧ್ಯೆ ಬೃಹತ್ ಗುಂಡಿ ಬಿದ್ದಿದೆ.
ಹೆದ್ದಾರಿ ಘೋಷಣೆ ಬಳಿಕ ಹೆಚ್ಚಿನ ಸಮಸ್ಯೆ: ಈ ಹಿಂದೆ ರಸ್ತೆಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದಾಗ ರಸ್ತೆಯ ಸಮಸ್ಯೆಗಳ ನಿವಾರಣೆ ತ್ವರಿತವಾಗಿ ಸಾಧ್ಯವಾಗುತ್ತಿದ್ದು, ಇದೀಗ ಉಡುಪಿ –ಹೆಬ್ರಿ– ಶಿವಮೊಗ್ಗ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಮಂತ್ರಾಲಯಕ್ಕೆ ಸೇರಿರುವುದರಿಂದ ಸಮಸ್ಯೆಗಳ ನಿವಾರಣೆ ಕಷ್ಟವಾಗುತ್ತಿದೆ. ಮಣಿಪಾಲದಿಂದ ಸೋಮೇಶ್ವರದ ತನಕ ಹೆದ್ದಾರಿಯ ಕೆಲಸಗಳು ಆರಂಭಗೊಳ್ಳದ ಕಾರಣ ರಸ್ತೆಯ ತುರ್ತು ದುರಸ್ಥಿಗೆ ಹೆದ್ದಾರಿ ಮಂತ್ರಾಲಯವು ಗಮನ ನೀಡುತ್ತಿಲ್ಲ ಎನ್ನಲಾಗಿದೆ. ಹೇಗಾದರೂ ಮಾಡಿ ರಸ್ತೆಯ ದುರಸ್ತಿ ಕಾರ್ಯ ಆಗುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಲ್ಪೆ ಹೆಬ್ರಿ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಘೋಷಣೆಯಾಗಿ 5 ವರ್ಷ ಸಮೀಪಿಸುತ್ತಿದ್ದರೂ, ಹೆದ್ದಾರಿ ಕೆಲಸಗಳು ಆರಂಭಗೊಂಡಿಲ್ಲ, ದುರಸ್ತಿ ಆದರೂ ಮಾಡಿಸಿ ಎಂದು ಇಲಾಖೆಯ ಅಧಿಕಾರಿಗಳನ್ನು ಕಾರ್ಕಳ ತಾಲ್ಲೂಕು ಪ್ರಗತಿಪರ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಒತ್ತಾಯಿಸಿದ್ದಾರೆ.