ತಿರುವನಂತಪುರ : ನಿಫಾ ಸೋಂಕು ಕುರಿತಂತೆ ಸರ್ಕಾರದ ಗಮನಸೆಳೆಯಲು ಶಾಸಕ ರೊಬ್ಬರು ಮುಖಗವಸು ಧರಿಸಿ ಅಧಿವೇಶನಕ್ಕೆ ಹಾಜರಾದ ಘಟನೆ ಕೇರಳ ವಿಧಾನಸಭೆಯಲ್ಲಿ ಸೋಮವಾರ ನಡೆಯಿತು.
ಕುಟ್ಯಾಡಿ ಕ್ಷೇತ್ರದ ಐಯುಎಂಲ್ ಪಕ್ಷದ ಶಾಸಕ ಪರಕ್ಕಲ್ ಅಬ್ದುಲ್ಲಾ ಅವರು ಮುಖಗವಸು ಧರಿಸಿ ಬಂದು ಪ್ರತಿಪಕ್ಷದ ಶಾಸಕರ ಕೈಕುಲುಕಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಶಾಸಕರ ಈ ರೀತಿಯ ವರ್ತನೆಯಿಂದ ಗಂಭೀರ ವಿಚಾರವನ್ನು ಕ್ಷುಲ್ಲಕವಾಗಿ ಬಿಂಬಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಿಫಾ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಶಾಸಕರ ವರ್ತನೆ ಹಾಸ್ಯಾಸ್ಪದವಾಗಿದೆ’ ಎಂದು ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದರು. ನಿಫಾ ವೈರಸ್ ದಾಳಿಯಿಂದ ಕೇರಳದಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ.