ಚನ್ನಪಟ್ಟಣ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಬಾಲಕಾರ್ಮಿಕನಾಗಿ ದುಡಿಯುತ್ತಿದ್ದ ಬಾಲಕನೊಬ್ಬನನ್ನು ತಾಲ್ಲೂಕು ಕಾರ್ಮಿಕ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಪಟ್ಟಣದ ಯಾರಬ್ ನಗರದ ನಿವಾಸಿಯಾಗಿದ್ದು, ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಮಾವಿನ ಮಂಡಿಯಲ್ಲಿ ಬಾಲಕಾರ್ಮಿಕನಾಗಿ ದಿನಗೂಲಿಗೆ ದುಡಿಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸೋಮವಾರ ದಾಳಿ ನಡೆಸಿದ ಅಧಿಕಾರಿಗಳು ಆತನನ್ನು ರಕ್ಷಿಸಿದ್ದಾರೆ.
ಪಟ್ಟಣದ ಟಿಪ್ಪುನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಬಾಲಕ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಬೇಸಿಗೆ ರಜೆ ಇದ್ದ ಕಾರಣ ಪೋಷಕರ ಒತ್ತಾಯದ ಮೇರೆಗೆ ಈ ದಿನಗಳು ಕೆಲಸ ಮಾಡುತ್ತಿದ್ದ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರದ ಚೈಲ್ಡ್ ಲೈನ್ ಸ್ವಯಂ ಸೇವಾ ಸಂಸ್ಥೆಯು ನೀಡಿದ ಲಿಖಿತ ದೂರಿನ ಮೇರೆಗೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಲಾಗಿದೆ. ಮಾವಿನಕಾಯಿ ಮಂಡಿಯ ಮಾಲೀಕನ ಮೇಲೆ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂರಕ್ಷಣೆ ಮಾಡಿರುವ ಬಾಲಕನನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪಕ್ಕದಲ್ಲಿಯೇ ಇರುವ ಶಾಲೆಯಲ್ಲಿ ಮುಂದುವರೆಸಲು ದಾಖಲಾತಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಯ್ಯ, ಕಾರ್ಮಿಕ ಅಧಿಕಾರಿಗಳಾದ ಮಾದಪ್ಪ, ಯತೀಶ್ ಕುಮಾರ್, ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ಸುರೇಶ್ ವಿ ಕುಲಕರ್ಣಿ, ಸತೀಶ್, ನಾಗರಾಜು ದಾಳಿ ಸಂದರ್ಭದಲ್ಲಿ ಹಾಜರಿದ್ದರು.