ಕೋಲಾರ: ‘ರೈತರ ಸಾಲ ಮನ್ನಾ ದುರುಪಯೋಗವಾದರೆ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಎಚ್ಚರಿಕೆ ನೀಡಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯ 24 ಸಾವಿರ ರೈತ ಕುಟುಂಬಗಳಿಗೆ ₹ 302 ಕೋಟಿ ಸಾಲ ಮನ್ನಾವಾಗಿದೆ. ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸುವ ಜವಾಬ್ದಾರಿ ಕಾರ್ಯದರ್ಶಿಗಳ ಮೇಲಿದೆ’ ಎಂದು ತಿಳಿಸಿದರು.
‘ರೈತರಿಗೆ ಸೇರಬೇಕಾಗಿರುವ ದುಡ್ಡಿಗೆ ನಾನು ಕಾವಲು ಇರುತ್ತೆನೆ. ವಂನೆ ಮಾಡಲು ಯತ್ನಿಸಿದರೆ ಸಹಿಸುವುದಿಲ್ಲ. ಸಮಾಜದಲ್ಲಿ ರೈತರಿಗೆ ಮೋಸ ಮಾಡಿರುವವರು ಯಾರು ಉದ್ದಾರ ಅಗಿಲ್ಲ. ಆ ಪರಿಸ್ಥಿತಿ ನಿಮಗೂ ಬಾರದಂತೆ ಎಚ್ಚರವಹಿಸಿ’ ಎಂದು ತಾಕೀತು ಮಾಡಿದರು.
‘ಬ್ಯಾಂಕ್ನಿಂದ ಇದುವರೆಗೂ ₹ 1,340 ಕೋಟಿ ವಿವಿಧ ಸಾಲ ನೀಡಲಾಗಿದೆ. ಅದೇ ರೀತಿ ಫಲಾನುಭವಿಗಳು ಸಮರ್ಪಕವಾಗಿ ಸಾಲ ಮರುಪಾವತಿ ಮಾಡಲು ಮುಂದಾಗುತ್ತಿದ್ದಾರೆ. ಆದರೆ ಸಿಬ್ಬಂದಿ ರೈತರಿಗೆ ಸಿಗುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಇನ್ನಾದರು ಎಚ್ಚರಿಕೆಯಿಂದ ಕೆಲಸ ಮಾಡಿ’ ಎಂದು ಹೇಳಿದರು.
ಬ್ಯಾಂಕಿನ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ‘ರೈತರು ಬ್ಯಾಂಕಿನ ಮೇಲಿ ಇಟ್ಟಿರುವ ವಿಶ್ವಾಸ ನೋಡಿದರೆ ಕೋಮಾದಿಂದ ಹೊರ ಬಂದಂತಾಗಿದೆ’ ಎಂದು ಅಭಿಪ್ರಾಯಪಟ್ಟರು.
‘ಸೊಸೈಟಿಗಳ ಕಾರ್ಯದರ್ಶಿಗಳು ಕೇವಲ ₹ 5 ಸಾವಿರಕ್ಕೆ ಕೆಲಸ ಮಾಡುತ್ತಿರುವವರು ಇದ್ದಾರೆ. ಇದೀಗ ಬ್ಯಾಂಕ್ ಸದೃಢಗೊಂಡು ಸಾಲ ವಿತರಣೆಯಿಂದ ಬಂದ ಲಾಭದಿಂದ ಇಂದು ₹ 20 ಸಾವಿರ ವೇತನ ಪಡೆಯುತ್ತಿದ್ದೀರಿ, ಅನ್ನ ನೀಡುವ ಸಂಸ್ಥೆಯನ್ನು ಉಳಿಸುವ ಹೊಣೆ ನಿಮ್ಮದಾಗಿದೆ’ ಎಂದು ಹೇಳಿದರು.